ಮಂಡ್ಯ:

ಶ್ರೀರಂಗಪಟ್ಟಣ ತಾಲೂಕಿನ ಸರ್ಕಾರಿ ಭೂಮಿ, ಕಾವೇರಿ ನದಿ, ಕೆರೆ-ಕಟ್ಟೆಗಳನ್ನು ಸಂರಕ್ಷಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ತಹಸೀಲ್ದಾರ್ ಚೇತನ ಯಾದವ್ ಹಾಗೂ ಕೆ.ಶೆಟ್ಟಹಳ್ಳಿ 1 ನೇ ವಿಭಾಗದ ರಾಜಸ್ವ ನಿರೀಕ್ಷಕ ಭಾಸ್ಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರೈತ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾಧಿಕಾರಿ ಡಾ.ಕುಮಾರ ಅವರು ನಾಲ್ಕೈದು ಬಾರಿ ಕೋಟ್ಯಂತರ ಬೆಲೆಬಾಳುವ ಸರ್ಕಾರಿ ಭೂಮಿಗೆ ನಾಮಫಲಕ ಹಾಕಿ ವಶಕ್ಕೆ ಪಡೆಯಿರಿ ಎಂದು ಹೇಳಿದ್ದರೂ ಕ್ಯಾರೆ ಎನ್ನದೆ ತಾಲೂಕಿನ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಬೇನಾಮಿ ಹೆಸರಿನಲ್ಲಿ ಖಾಸಗಿ ಹೆಸರಿನಲ್ಲಿದ್ದ ಆರ್‌ಟಿಸಿಯನ್ನು ರದ್ದುಪಡಿಸಿ ಸರ್ಕಾರಿ ಭೂಮಿ ಸಂರಕ್ಷಿಸಬೇಕಾದ ತಹಸೀಲ್ದಾರ್ ಮತ್ತು ಆರ್‌ಐ, ವಿಎಗಳು ನಮಗು ಇದಕ್ಕೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕೋಟ್ಯಾಂತರ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ನಾಮಫಲಕ ಹಾಕುವಂತೆ ಡೀಸಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ಹೇಳಿದರೂ ನಾಮಫಲಕ ಹಾಕಿ ವಶಕ್ಕೆ ಪಡೆಯದೇ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳ ಜೊತೆ ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ದೂರಿದ್ದಾರೆ.


ರಾಜಸ್ವ ನಿರೀಕ್ಷಕ ಭಾಸ್ಕರ್ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾನೆ. ಸರ್ಕಾರಿ ಭೂಮಿ, ಕಾವೇರಿ ನದಿ, ಕೆರೆ-ಕಟ್ಟೆಗಳನ್ನು ಸಂರಕ್ಷಿಸಲು ವಿಫಲರಾಗಿ ಕೆ.ಶೆಟ್ಟಹಳ್ಳಿ 1 ರಲ್ಲಿ ರಾಜಸ್ವ ನಿರೀಕ್ಷಕರಾಗಿ ಲಂಚಗುಳಿತನದಿಂದ ಅಕ್ರಮವಾಗಿ ಅಪಾರ ಹಣ ಗಳಿಸಿದ್ದಾನೆ ಎಂದು ಸಾರ್ವಜನಿಕರಿಂದ ಕೇಳಿ ಬಂದಿದೆ ಎಂದು ಆರೋಪಿಸಿದ್ದಾರೆ.

ತಹಸೀಲ್ದಾರ್ ಹಾಗೂ ರಾಜಸ್ವ ನಿರೀಕ್ಷಕರ ಮೇಲೆ ಸಮಗ್ರ ತನಿಖೆ ನಡೆಸದಿದ್ದರೆ ಡೀಸಿ, ಮುಖ್ಯಕಾರ್ಯದರ್ಶಿಗಳು, ಕಂದಾಯ ಕಾರ್ಯದರ್ಶಿಗಳು, ಕಂದಾಯ ಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.