ಸಾರಾಂಶ
ದಾವಣಗೆರೆಯಲ್ಲಿ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಸಭಾಂಗಣದಲ್ಲಿ ಡಾ. ಜೆ. ರಘುಕುಮಾರ ಬೆನ್ನು ನೋವಿಗೆ ಕಾರಣ ಮತ್ತು ಅದರ ಪರಿಹಾರ ಕುರಿತು ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆನ್ನು ನೋವು ಎಂಬುದು ಎಲ್ಲರನ್ನೂ ಕಾಡುವ ಒಂದು ಸಾಮಾನ್ಯ ಸಮಸ್ಯೆ. ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಮತ್ತು ಜೀವನ ಶೈಲಿ ಬದಲಾವಣೆಯಿಂದ ಶಾಶ್ವತ ಬೆನ್ನು ನೋವು ಬರದಂತೆ ನೋಡಿಕೊಳ್ಳಬಹುದು ಎಂದು ನಗರದ ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಕೀಲು ಮೂಳೆ ವಿಭಾಗದ ಪ್ರಾಧ್ಯಾಪಕ ಡಾ.ಜೆ.ರಘುಕುಮಾರ ತಿಳಿಸಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಯಸ್ಕರನ್ನು ಕಾಡುವ ಬೆನ್ನು ನೋವು- ಕಾರಣ-ಚಿಕಿತ್ಸೆ ಮತ್ತು ಪರಿಹಾರ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಬೆನ್ನಿನ ಸ್ತಂಭವು ಬೆನ್ನೆಲುಬು ಮತ್ತು ಮಾಂಸ ಖಂಡಗಳಿಂದ ರಚನೆಯಾಗಿದೆ. ಬೆನ್ನು ತಲೆಯ ಭಾರವನ್ನು ಹೊತ್ತು ಹೊಟ್ಟೆ ತೂಕವನ್ನು ಕಾಲುಗಳಿಗೆ ರವಾನಿಸುತ್ತದೆ. ಬೆನ್ನು ನಮ್ಮ ಭಾವಭಂಗಿಯನ್ನು ಕಾಪಾಡಿ ಭಾಗಿಸುವಿಕೆಯನ್ನು ಒದಗಿಸುತ್ತದೆ. ಮಾಂಸಖಂಡಗಳ ಮೇಲಿನ ಒತ್ತಡದಿಂದ ಸಾಮಾನ್ಯವಾಗಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಬೆನ್ನಿನ ರಚನಾತ್ಮಕ ಅಥವಾ ಜನ್ಮಜಾತ ತೊಂದರೆಗಳು, ಅನುಚಿತ ಭಂಗಿ, ಮೂಳೆ ಸವೆತ, ಸಂಧಿವಾತ ಔದ್ಯೋಗಿತ ಮತ್ತು ಇತ್ಯಾದಿ ಸೋಂಕು ಕಾರಣಗಳೂ ಇರಬಹುದು. ಜಡ ಜೀವನ ಶೈಲಿ, ಮದ್ಯಪಾನ, ಧೂಮಪಾನ, ಹಿರಿಯ ವಯಸ್ಸು, ಮತ್ತು ಶಾರೀರಿಕ ಬೊಜ್ಜು ಪ್ರಮುಖ ಕಾರಣಗಳಾಗಿ ಗುರುತಿಸಬಹುದು ಎಂದರು.ರೋಗ ಲಕ್ಷಣದ ಇತಿಹಾಸ, ದೈಹಿಕ ಪರೀಕ್ಷೆ, ಎಕ್ಸ್ ರೇ ಮತ್ತು ಎಂ.ಆರ್.ಐ ಪರೀಕ್ಷೆಗಳಿಂದ ಬೆನ್ನು ನೋವಿನ ಕಾರಣಗಳನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಒದಗಿಸಬಹುದು. ಇಂದಿನ ಆಧುನಿಕ ವೈದ್ಯಕೀಯ ಯುಗದಲ್ಲಿ ಔಷಧಿಗಳು ಮತ್ತು ಶಸ್ತ್ರ ಚಿಕಿತ್ಸೆಗಳಿಂದ ಬೆನ್ನು ನೋವನ್ನು ನಿವಾರಿಸಬಹುದು. ಯಾವ ವಯಸ್ಸಿನವರಾದರು ಸರಿಯೇ ಬೆನ್ನು ನೋವನ್ನು ನಿರ್ಲಕ್ಷಿಸದೇ, ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಸೂಕ್ತ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ತಡೆಯಬಹುದು ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ, ಡಾ. ಮೃತ್ಯುಂಜಯ, ಡಾ. ರೇವಪ್ಪ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ರೊಳ್ಳಿ ಮಂಜುನಾಥ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.