ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನಿರಪರಾಧಿಯಾಗಿ ಹೊರಬರುತ್ತಾರೆಂಬ ವಿಶ್ವಾಸವನ್ನು ಮಂಡ್ಯ ಮಾಜಿ ಸಂಸದೆ ಸುಮಲತಾ ವ್ಯಕ್ತಪಡಿಸಿದ್ದಾರೆ.ಘಟನೆ ಕುರಿತಂತೆ ಸಾಮಾಜಿಕ ಜಾಲ ತಾಣ ಫೇಸ್ಬುಕ್ನಲ್ಲಿ ಸುದೀರ್ಘ ಮಾಹಿತಿ ಹಂಚಿಕೊಂಡಿರುವ ಸುಮಲತಾ, ರೇಣುಕಾಸ್ವಾಮಿ ಕೊಲೆಗೆ ಸಂತಾಪ ಸೂಚಿಸಿ, ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ.
ಅವರಿಗೆ ನ್ಯಾಯ ಸಿಗಲಿ, ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.ಈ ಘಟನೆ ನನ್ನ ಹೃದಯವನ್ನು ಛಿದ್ರಗೊಳಿಸಿದೆ. ಬಹಳ ದಿನ ಆಘಾತ ಹಾಗೂ ನೋವು ತಂದಿದೆ. ದರ್ಶನ್ ಸ್ಟಾರ್ ಆಗುವುದಕ್ಕೂ ಮೊದಲಿನಿಂದಲೂ ನನಗೆ ಪರಿಚಯ. ಸ್ಟಾರ್ಗಿಂತ ನನ್ನ ಕುಟುಂಬದ ಸದಸ್ಯ, ಯಾವಾಗಲೂ ನನಗೆ ಮಗನಂತೆ. ನನಗೆ ತಾಯಿಯ ಗೌರವ ಸ್ಥಾನ ಹಾಗೂ ಮಗನ ಪ್ರೀತಿ ನೀಡಿದ್ದಾರೆ. ಯಾವ ತಾಯಿಯೂ ಈ ಪರಿಸ್ಥಿತಿಯಲ್ಲಿ ಮಗುವನ್ನು ನೋಡಲು ಸಹಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಕೃತ್ಯವನ್ನು ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಾನು ನಂಬಿದ್ದೇನೆ. ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ದರ್ಶನ್ ತಾವು ನಿರಾಪರಾಧಿ ಎಂದು ಸಾಬೀತುಪಡಿಸಿ ಹೊರ ಬರುತ್ತಾರೆಂಬ ವಿಶ್ವಾಸವಂತೂ ಇದೆ. ಮತ್ತೆ ಅವರು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವುದರೊಂದಿಗೆ ಸಾಮಾನ್ಯ ಜೀವನವನ್ನು ಪುನಾರಾರಂಭಿಸುತ್ತಾರೆ ಎಂದು ನಾನು ಭರವಸೆ ಹೊಂದಿದ್ದೇನೆ ಎಂದಿದ್ದಾರೆ.ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯ. ತಮ್ಮ ಕಾಮೆಂಟ್ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಿದ್ದೇನೆ. ದರ್ಶನ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನು ಯಾವುದೂ ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ.
ಈ ಪರಿಸ್ಥಿತಿಯಲ್ಲಿ ನಾನು ನೆಮ್ಮದಿಯಿಂದ ಸಮಸ್ಯೆಯಿಂದ ದೂರವಿರುವುದು ಅಸಾಧ್ಯ. ಇದು ನನ್ನದೇ ಕೌಟುಂಬಿಕ ಸಮಸ್ಯೆ ಎಂದೂ ಹೇಳಿಕೊಂಡಿದ್ದಾರೆ.ಚಿತ್ರರಂಗ ಅಸ್ತವ್ಯಸ್ತವಾಗಿದೆ. ದರ್ಶನ್ ಅಭಿಮಾನಿಗಳು ಶಾಂತವಾಗಿರಿ. ಈ ಕ್ಷಣದಲ್ಲಿ ಯಾವುದೇ ಹೇಳಿಕೆಗಳನ್ನು ನೀಡಬೇಡಿ. ದಯವಿಟ್ಟು ಶಾಂತವಾಗಿರಿ. ನಮಲ್ಲಿ ಕಾನೂನಿಗಿಂತ ಯಾರೂ ಮೇಲಲ್ಲ. ನಾವು ಅದನ್ನು ಗೌರವಿಸಬೇಕು.
ಒಳ್ಳೆಯ ಸಮಯ ಮರಳಲು ಪ್ರಾರ್ಥಿಸಬೇಕು. ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇರಲಿ. ದೇವರಲ್ಲಿ ನಂಬಿಕೆ ಇರಲಿಎಲ್ಲವೂ ಸರಿಯಾಗುತ್ತವೆ. ಸತ್ಯ ಮೇವ ಜಯತೆ ಎಂದು ಪೋಸ್ಟ್ ಹಾಕಿದ್ದಾರೆ.