ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ೧೯ ವರ್ಷದೊಳಗಿನ ಬಾಲಕ- ಬಾಲಕಿಯರು, ಹಿರಿಯರ ರಾಜ್ಯಮಟ್ಟದ ಬ್ಯಾಡ್ಮಿಂಟನ್ ರ್‍ಯಾಂಕಿಂಗ್ ಪಂದ್ಯಾವಳಿಯನ್ನು ಜೂ.೧೪ ರಿಂದ ಜೂ.೨೦ರವರೆಗೆ ನಗರದ ಪಿಇಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ತಿಳಿಸಿದರು.

ಈ ಪಂದ್ಯಾವಳಿಯಲ್ಲಿ ೭೦೦ ಮಂದಿ ಬಾಲಕ- ಬಾಲಕಿಯರು, ಮಹಿಳೆಯರು ಹಾಗೂ ಪುರುಷರು ಭಾಗವಹಿಸುವ ನಿರೀಕ್ಷೆ ಇದೆ. ಅವರಿಗೆ ಅಗತ್ಯವಿರುವ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದಲ್ಲದೆ, ಅಸೋಸಿಯೇಷನ್ ವತಿಯಿಂದ ಕ್ರೀಡಾಪಟುಗಳು, ಅಂಪೈರ್‌ಗಳು, ಕೋಚ್‌ಗಳಿಗೆ ಹಾಗೂ ಕ್ರೀಡಾಪಟುಗಳ ಜೊತೆ ಬರುವವರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಕೆ.ಎಸ್.ವಿಜಯಾನಂದ್ ಪಂದ್ಯಾವಳಿ ಸುಗಮವಾಗಿ ನಡೆಯುವುದಕ್ಕೆ ಪೂರಕವಾದ ವ್ಯವಸ್ಥೆಗಳೆಲ್ಲವನ್ನೂ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಮಂಡ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನವರ ಸಹಕಾರದೊಂದಿಗೆ ರಾಜ್ಯಮಟ್ಟದ ರ್‍ಯಾಂಕಿಂಗ್ ಪಂದ್ಯಾವಳಿಯನ್ನು ಅತ್ಯುತ್ತಮವಾಗಿ ನಡೆಸಲಾಗುವುದು. ಪಂದ್ಯಾವಳಿಯಲ್ಲಿ ಮೊದಲ ಬಹುಮಾನವಾಗಿ ೧೯ ವರ್ಷದೊಳಗಿನ ಬಾಲಕ- ಬಾಲಕಿಯರಿಗೆ ₹೨.೪೦ ಲಕ್ಷ, ಹಿರಿಯರಿಗೆ ₹೨.೬೦ ಲಕ್ಷ ವರೆಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪ್ರತಿಷ್ಠಿತ ವಜ್ರ ಮಹೋತ್ಸವ ವರ್ಷವನ್ನು ಸ್ಮರಿಸಲು ಸಿದ್ಧತೆ ನಡೆಸುತ್ತಿರುವಾಗ ಸಂಘವು ಕರ್ನಾಟಕದಾದ್ಯಂತ ವರ್ಷಪೂರ್ತಿ ಆಚರಣೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಮಂಡ್ಯದಿಂದಲೇ ವಜ್ರಮಹೋತ್ಸವ ಆಚರಣೆಗೆ ಚಾಲನೆ ನೀಡಲಾಗುತ್ತಿದೆ ಎಂದರು.


ಜಿಲ್ಲೆಯು ದಶಕಗಳಿಂದ ಬ್ಯಾಡ್ಮಿಂಟನ್ ಅಭಿವೃದ್ಧಿ ಮತ್ತು ಪ್ರಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ದಕ್ಷಿಣ ವಲಯ ಅಂತಾರಾಜ್ಯ ಚಾಂಪಿಯನ್‌ಶಿಪ್‌ಗಳು, ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು, ಹಲವಾರು ರಾಜ್ಯ ಚಾಂಪಿಯನ್‌ಶಿಪ್‌ಗಳು ಸೇರಿದಂತೆ ಪ್ರಮುಖ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದಾಗಿ ಹೇಳಿದರು.

ಸಕ್ಕರೆ ನಾಡು ಕರ್ನಾಟಕ ಮತ್ತು ದೇಶಕ್ಕೆ ಪ್ರಶಸ್ತಿಗಳನ್ನು ತಂದ ಹಲವಾರು ಸಾಧನೆಗೈದ ಆಟಗಾರರನ್ನು ಸಹ ನೀಡಿದೆ. ಅವರಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಆದಿತ್ಯ ಪ್ರಕಾಶ್, ರಾಷ್ಟ್ರೀಯ ಚಾಂಪಿಯನ್ ಎಂ.ರಘು ಸಾಧನೆಗಳು ಯುವ ಆಟಗಾರರಿಗೆ ಸ್ಫೂರ್ತಿ ನೀಡುತ್ತಿವೆ ಎಂದು ನುಡಿದರು.

ಗೋಷ್ಠಿಯಲ್ಲಿ ಡಾ.ಕೆ.ಎಂ.ಶಿವಕುಮಾರ್, ಡಾ.ಎಚ್.ಅನಿಲ್‌ಕುಮಾರ್, ಮನು, ಸುಧೀರ್, ಹರೀಶ್, ಮುರಳಿ ಇದ್ದರು.