ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆ ಈಗಾಗಲೇ ಮನೆ-ಮನೆಗೆ ಗಣತಿ ನಮೂನೆಗಳನ್ನು ವಿತರಣೆ ಮಾಡಲಾಗಿದ್ದು, ಭರ್ತಿ ಮಾಡಿದ ನಮೂನೆಗಳನ್ನು ಹಿಂದಿರುಗಿಸಲು ಜು. 29 ಕೊನೆಯ ದಿನವಾಗಿದೆ. ಅಷ್ಟರೊಳಗೆ ವಿವರಗಳನ್ನು ಭರ್ತಿ ಮಾಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ಹಿಂದಿರುಗಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಟಿ.ವೈ. ದಾಸನಕೊಪ್ಪ ಹೇಳಿದರು.

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಒಳಾಂಗಣ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - 2026 (ಎಸ್‌ಐಆರ್) ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ, ಪ್ರತಿಯೊಬ್ಬ ಅರ್ಹ ಮತದಾರರಿಗೂ ಗಣತಿ ನಮೂನೆಗಳಲ್ಲಿ ಭರ್ತಿ ಮಾಡುವಲ್ಲಿ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಸ್ಪರ್ಧಿಸಿದ್ದು, ಪುರುಷರ ವಿಭಾಗದಲ್ಲಿ ನಾಗರಾಜ್ ನಾಯ್ಕ್ ಮತ್ತು ನಚಿಕೇತ್ ಕಳಲಕೊಂಡ ತಂಡ ಅಂತಿಮ ಪಂದ್ಯದಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿತು. ಮಹಿಳೆಯರ ವಿಭಾಗದಲ್ಲಿ ಕೀರ್ತಿ ಆನಂದ ಮುರ್ಡೇಶ್ವರ ಮತ್ತು ಬಿ. ಈಶ್ವರಿ ವಿಜೇತರಾದರು.

ತಾಪಂ ಯೋಜನಾ ಅಧಿಕಾರಿ ಚೋಳಪ್ಪ ಬಣಕಾರ, ಕಾಲೇಜಿನ ಪ್ರಾಚಾರ್ಯ ಪ್ರಸನ್ನ ಸಿಂಗ್, ಪ್ರಾಧ್ಯಾಪಕ ಬಲರಾಮ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಇದ್ದರು.

ಎಸ್‌ಐಆರ್ ಜಾಗೃತಿ ಮೂಡಿಸಿದ ರಂಗೋಲಿ ಸ್ಪರ್ಧೆ:


ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಜಾಗೃತಿ ನಿಮಿತ್ತ ಕುಮಟಾ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳ ಎಲ್ಲ ಕೃಷಿ ಸಖಿ ಮತ್ತು ಪಶು ಸಖಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಒಟ್ಟು ೪೪ ಮಂದಿ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಗಾಯತ್ರಿ ಎಸ್. ನಾಯ್ಕ, ಸುನೀತಾ ನಾಯ್ಕ ನೇತೃತ್ವದ ಸಂತೆಗುಳಿಯ ಸಹ್ಯಾದ್ರಿ ಸಂಜೀವಿನಿ ಒಕ್ಕೂಟ ಪ್ರಥಮ ಸ್ಥಾನ ಪಡೆದರೆ, ನಿವೇದಿತಾ ಗೌಡ ಮತ್ತು ಶಾಂತಿ ಗೌಡ ನೇತೃತ್ವದ ನಾಡುಮಾಸ್ಕೇರಿಯ ಪಂಚಮಿ ಸಂಜೀವಿನಿ ಒಕ್ಕೂಟ ದ್ವಿತೀಯ ಸ್ಥಾನ ಪಡೆಯಿತು. ಮಾಲಿನಿ ಪಟಗಾರ ಮತ್ತು ನಾಗಮ್ಮ ಗೌಡ ನೇತೃತ್ವದ ತೊರ್ಕೆಯ ಜನನಿ ಸಂಜೀವಿನಿ ಒಕ್ಕೂಟ ತೃತೀಯ ಸ್ಥಾನ ಪಡೆಯಿತು.ದೋಷರಹಿತ ಮತದಾರರ ಪಟ್ಟಿ, ಬಲವಾದ ಪ್ರಜಾಪ್ರಭುತ್ವ ಮತ್ತು ಸ್ವಚ್ಛತಾ ಶ್ರಮದಾನ ಧ್ಯೇಯವಾಕ್ಯದಡಿ ಮತ್ತು ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದೆಂಬ ಜಾಗೃತಿಗಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.