ಸಾರಾಂಶ
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.ನಗರದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ತಾಲೂಕು ಒಕ್ಕಲಿಗರ ಸಂಘ ವತಿಯಿಂದ ನಡೆದ ನಾಡಪ್ರಭು ಶ್ರೀಕೆಂಪೇಗೌಡ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ನಾಯಕರಾಗಿದ್ದರು. ಅವರು ನಾಡುಕಂಡ ಅದ್ವಿತೀಯ ನಾಯಕರಾಗಿದ್ದಾರೆ. ಎಲ್ಲ ಜನಾಂಗದವರಿಗೂ ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರು ನಗರವನ್ನು ಕಟ್ಟಿದರು. ಬೆಂಗಳೂರಿನಲ್ಲಿ ಅನೇಕ ಕೆರೆ, ಕಟ್ಟೆಗಳನ್ನು ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದರು. ಆದರೆ, ಪ್ರಸ್ತುತ ಬೆಂಗಳೂರು ಬೆಳವಣಿಗೆಯಿಂದಾಗಿ ಕೆರೆ, ಕಟ್ಟೆಗಳೆಲ್ಲ ಮುಚ್ಚಿ ಹೋಗಿವೆ ಎಂದರು.ಪ್ರಸ್ತುತ ಬೆಂಗಳೂರು ವಿಶ್ವದಲ್ಲಿಯೇ ಬೃಹದಾಕಾರವಾಗಿ ಬೆಳೆದಿದೆ. ಕೋಟ್ಯಾಂತರ ಜನರು ಆಶ್ರಯ ಪಡೆದಿದ್ದಾರೆ. ಕೆಂಪೇಗೌಡರು ಎಲ್ಲರ ಮನಸ್ಸಿನಲ್ಲಿ ಉಳಿದಿರುವ ನಾಯಕರಾಗಿದ್ದು ಅವರ ಸ್ಮರಣೆ ಅಗತ್ಯವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾಲೂಕು ಒಕ್ಕಲಿಗ ಸಂಘಕ್ಕೆ ವೈಯುಕ್ತಿಕ ವಾಗಿ ಖರೀದಿಸಿ ಕೊಟ್ಟಿರುವ ನಿವೇಶನವನ್ನು ಸದುಪಯೋಗ ಪಡಿಸಿಕೊಳ್ಳಿ ನಾನೂ ಕೂಡ ಅದರ ಬೆಳವಣಿಗೆ ಸಹಕಾರ ನೀಡುತ್ತೇನೆ ಎಂದರು.ಮೈಸೂರು ಆದಿ ಚುಂಚನಗಿರಿ ಸಂಸ್ಥಾನ ಮಠದ ಶ್ರೀ ಸೋಮನಾಥಸ್ವಾಮೀಜಿ ಮಾತನಾಡಿ, ನಾಡುಪ್ರಭು ಕೆಂಪೇಗೌಡರ ಸಾಧನೆಗಳು 516 ವರ್ಷಗಳು ಕಳೆದರೂ ಜೀವಂತವಾಗಿವೆ. ಅವರ ಸಾಮಾಜಿಕ ಕಳಕಳಿ, ಧಾರ್ಮಿಕ ಭಾವನೆಗಳನ್ನು ಸಾಮಾಜಿಕ ವ್ಯವಸ್ಥೆಯನ್ನು ಗುಣಗಾನ ಮಾಡುವ ಕಾರ್ಯಕ್ರಮ ಇದಾಗಿದೆ. ಕೆಂಪೇಗೌಡರು ದಕ್ಷಿಣ ಭಾರತದಲ್ಲಿ ಒಂದು ವಿಶೇಷವಾದ ಬೆಂಗಳೂರು ನಗರವನ್ನು ಕಟ್ಟಿದ್ದರು. ಅವರ ಧಾರ್ಮಿಕ ಭಾವನೆಯನ್ನು ನಮ್ಮ ಮಕ್ಕಳಲ್ಲಿ ಬಿತ್ತಬೇಕು. ಎಲ್ಲರೂ ಸಹೃದಯ ಭಾವನೆಯಿಂದ ಬೆರೆಯಬೇಕು. ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಆಚರಣೆ ಮಾಡಿರುವುದು ಸಂತಸವಾಗಿದೆ ಮುಂದಿನ ದಿನಗಳಲ್ಲಿ ಒಕ್ಕಲಿಗರಿಷ್ಟೆ ಅಲ್ಲ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಕೆಂಪೇಗೌಡರ ಜಯಂತಿ ಆಚರಣೆ ಮಾಡಬೇಕು ಎಂದರು.
ಮುಖ್ಯ ಭಾಷಣಕಾರ ವೈದ್ಯ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಕೆಂಪೇಗೌಡರ ಸಾಧನೆ, ಸಾಮಾಜಿಕ ಕಳಕಳಿಯನ್ನು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸವನ್ನು ಮಾಡಬೇಕಾಗಿದೆ. ಒಕ್ಕಲಿಗರು ಈ ದೇಶದ ಮೂಲ ಪುರುಷರಾಗಿದ್ದಾರೆ.ಆದ್ದರಿಂದ ಜಾತಿಯಲ್ಲಿ ಒಕ್ಕಲಿಗ ಎಂದೇ ಬರೆಸಿ ಎಂದು ಸಲಹೆ ನೀಡಿದರು.ದೇಶದಲ್ಲಿ 4600 ಜಾತಿಗಳಿದ್ದು ಅವು ಒಕ್ಕಲಿಗ ಜಾತಿಯಿಂದ ಚದುರಿ ಹೋಗಿದೆ ಎಂದು ಇತಿಹಾಸದಲ್ಲಿದೆ. ಕೆಂಪೇಗೌಡರು ಎಲ್ಲ ಸಮುದಾಯದವರ ಏಳಿಗೆಗೆ ಒತ್ತು ನೀಡಿ ವಾಣಿಜೋದ್ಯ ಮಕ್ಕಾಗಿ ಬೆಂಗಳೂರಿನಲ್ಲಿ ಹಲವು ಪೇಟೆಗಳನ್ನು ಕಟ್ಟಿಸಿದರು ಎಂದರು.ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಡಾ.ರಾಜ್ ಕುಮಾರ್ ಕಲಾಮಂದಿರದ ಬಳಿಗೆ ತೆರಳಿ ಮುಕ್ತಾಯವಾಯಿತು.ವಿಧಾನ ಪರಿಷತ್ ಸದಸ್ಯ ಮಂಜೇಗೌಡರು ಅಧ್ಯಕ್ಷತೆ ವಹಿಸಿದ್ದರು.ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿದರು.ತಾಲೂಕು ಒಕ್ಕಲಿಗರ ಸಂಘ ಅಧ್ಯಕ್ಷ ಸುದರ್ಶನಗೌಡ ಘನ ಉಪಸ್ಥಿತಿ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ ಪ್ರಸ್ತಾವಿಕ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಮಾಜಿ ಶಾಸಕ ಆರ್.ನರೇಂದ್ರ, ಎಡಿಸಿ ಜವರೇಗೌಡ, ಎಸ್ಪಿ ಡಾ.ಬಿ.ಟಿ.ಕವಿತ, ಮಾನಸ ವಿದ್ಯಾ ಸಂಸ್ಥೆ ಕಾರ್ಯದರ್ಶಿ ದತ್ತೇಶ್, ಸತೀಶ್, ಸಂಘ ಉಪಾಧ್ಯಕ್ಷರಾದ ಚಿನ್ನಮುತ್ತು, ಪಿ.ಕೆ.ರಾಜು, ಕೆ.ಎಂ.ಮಂಜು, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಸಹ ಕಾರ್ಯದರ್ಶಿ ನಾಗೇಂದ್ರ ಗೌಡ, ಖಜಾಂಚಿ ನಾರಾಯಣ ಪ್ರಸಾದ್, ಮಹಾಪೋಷಕ ಚಿಕ್ಕರಂಗೇಗೌಡ, ಪೋಷಕರಾದ ಮಂಜುನಾಥ್ ಗೌಡ, ಸಿದ್ದೇಗೌಡ, ಚಿಕ್ಕತಾಯಮ್ಮ, ಸದಸ್ಯರಾದ ಪಿ.ಹೆಚ್.ರಾಜು, ರಾಜೇಶ್, ನಾಗೇಂದ್ರ, ಶೇಖರ್, ಸಿದ್ದರಾಜೇಗೌಡ, ಮರಿಸ್ವಾಮಿ, ಅರುಣ್ ಕುಮಾರ್ ಗೌಡ, ಪುರುಷೋತ್ತಮ, ರಾಜಶೇಖರ, ರಮೇಶ್, ಮಹೇಶ್ ಇತರರು ಹಾಜರಿದ್ದರು.