ಬಂಟ್ವಾಳ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪಾಣೆಮಂಗಳೂರಿನ ಎಸ್.ಎಸ್.ಆಡಿಟೋರಿಯಂ ಆಲಡ್ಕದಲ್ಲಿ ಮರ್ಹೂಂ ಮಹಮ್ಮದ್ ಮಾರಿಪಳ್ಳ ಸಭಾಂಗಣ, ಮರ್ಹೂಂ ಫಾರೂಕ್ ಗೂಡಿನಬಳಿ ದ್ವಾರ, ಮರ್ಹೂಂ ಹಾಜಿ ಜಿ.ಅಬ್ದುಲ್ ಖಾದರ್ ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಂಗಳವಾರ ಬೆಳಗ್ಗೆ ಚಾಲನೆ ನೀಡಿದರು.ಕರಾವಳಿಯಲ್ಲಿ ಜನಜೀವನದೊಂದಿಗೆ ಸಮ್ಮಿಳಿತವಾದ ಬ್ಯಾರಿ ಭಾಷೆ ಎಲ್ಲರ ಬಳಕೆಯ ಭಾಷೆಯೂ ಆಗಿರುವುದಕ್ಕೆ ಇಲ್ಲಿನ ಜನರ ಬಾಂಧವ್ಯ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.ಹಿರಿಯ ಕವಿ, ಗಾಯಕ ರಹೀಂ ಬಿ.ಸಿರೋಡ್ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಉಮೈರತ್ ಕುಮೇರ್ ಅವರು ಬರೆದ ಬ್ಯಾರಿ ಕಥಾ ಸಂಕಲನವನ್ನು ಶಾಸಕ ರಾಜೇಶ್ ನಾಯ್ಕ್ ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಮೊಹಿದ್ದೀನ್ ಶಿಕ್ಷಣ ಸಂಸ್ಥೆ ತುಂಬೆ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ತುಂಬೆ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬೆಳಗಾವಿ ಸೆನೆಟ್ ಸದಸ್ಯ ಡಾ. ಮುಸ್ತಫ ಬಸ್ತಿಕೋಡಿ, ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮುಮ್ತಾಝ್ ಎಚ್.ಐ., ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ಪಿ.ಎಂ.ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ಹಂಝ ಬಸ್ತಿಕೋಡಿ, ಗೌರವ ಸಲಹೆಗಾರ ಪಿ. ಮೊಹಮ್ಮದ್ ರಫೀಕ್, ಅಕಾಡೆಮಿ ಸದಸ್ಯ ಸಂಚಾಲಕ ಅಬೂಬಕ್ಕರ್ ಅನಿಲಕಟ್ಟೆ, ಪ್ರಮುಖರಾದ ಪಿ.ಎ. ರಹೀಮ್, ಮಹಮ್ಮದ್ ಆಲಿ, ಬಿ.ಎಸ್.ಮಹಮ್ಮದ್, ಅಬ್ದುಲ್ ಲತೀಫ್ ನೇರಳಕಟ್ಟೆ, ತಾಜುದ್ದೀನ್ ಅಮ್ಮುಂಜೆ, ಖಾಲಿದ್ ಉಜಿರೆ, ಯು. ಮುಸ್ತಫಾ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಸ್ವಾಗತಿಸಿದರು. ಪಿ.ಎಂ.ಅಶ್ರಫ್ ನಿರೂಪಿಸಿದರು. ಸಮ್ಮೇಳನ ಶ್ರೀ ಶಾರದಾ ಪ್ರೌಢಶಾಲೆಯ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿ ಬಂತು. ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಧ್ವಜಾರೋಹಣ ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚಾಗೋಷ್ಠಿ, ಮಧ್ಯಾಹ್ನ ಬ್ಯಾರಿ ಕವಿಗೋಷ್ಠಿ, ಸಂಜೆ ಸಮಾರೋಪ ಸಮಾರಂಭ ನಡೆಯಿತು.ಸಮ್ಮೇಳನಾಧ್ಯಕ್ಷರ ಭಾಷಣ: ಬ್ಯಾರಿ ಭಾಷೆ ಮತ್ತು ಸಾಹಿತ್ಯದ ಉಳಿವಿಗೆ ಪ್ರತಿಯೊಬ್ಬ ಬ್ಯಾರಿ ಸಮುದಾಯದ ಸದಸ್ಯರೂ ಹೊಣೆಗಾರರಾಗಬೇಕು ಎಂದು ಹಿರಿಯ ಕವಿ ಹಾಗೂ ಗಾಯಕ ರಹೀಂ ಬಿ.ಸಿ.ರೋಡು ಕರೆ ನೀಡಿದರು.

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಅವರು, ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಬಂಟ್ವಾಳ ತಾಲೂಕಿನ ಕೊಡುಗೆ ಅಪಾರವಾಗಿದ್ದು, ಹಳೆಯ ತಲೆಮಾರಿನ ಸಾಹಿತಿಗಳು, ಕಲಾವಿದರು ಮತ್ತು ಭಾಷಾಭಿಮಾನಿಗಳ ಹೋರಾಟದಿಂದ ಇಂದು ಬ್ಯಾರಿ ಭಾಷೆಗೆ ಗೌರವದ ಸ್ಥಾನ ದೊರೆತಿದೆ ಎಂದು ಹೇಳಿದರು.ಬ್ಯಾರಿ ಭಾಷೆಯನ್ನು ಪ್ರೀತಿಸೋಣ, ಮಾತನಾಡೋಣ, ಬರೆಯೋಣ ಮತ್ತು ಹಾಡೋಣ. ಜೊತೆಗೆ ಕನ್ನಡ, ತುಳು, ಕೊಂಕಣಿ, ಉರ್ದು ಸೇರಿದಂತೆ ಎಲ್ಲಾ ಭಾಷೆಗಳಿಗೆ ಗೌರವ ನೀಡೋಣ ಎಂದು ಗಾಯಕ ರಹೀಂ ಬಿ.ಸಿ.ರೋಡು ಹೇಳಿದರು.