ಕನ್ನಡಪ್ರಭ ವಾರ್ತೆ ಬೆಂಗಳೂರು
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಿತವಾಗಿ ಬಳಸಿ ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಗ್ರಾಹಕರ ಬಾಟಲ್, ಕ್ಯಾನ್ಗಳಿಗೆ ಹಾಕಬಾರದು. ಒಂದೊಮ್ಮೆ ಹಾಕಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇಂಡಿಯನ್ ಆಯಿಲ್ ಕಂಪನಿ ಬಂಕ್ಗಳಿಗೆ ಎಚ್ಚರಿಕೆ ನೀಡಿದೆ.ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬಾಟಲ್, ಕ್ಯಾನ್ಗಳಿಗೆ ಹಾಕಬಾರದು ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಂಪನಿ ತನ್ನ ಅಧೀನದ ಪೆಟ್ರೋಲ್ ಬಂಕ್ಗಳಿಗೆ ಸೂಚನೆ ನೀಡಿದೆ. ಒಂದೊಮ್ಮೆ ಬಾಟಲ್ಗಳಲ್ಲಿ ತೈಲ ವಿತರಿಸುವುದು ವಿಡಿಯೋ ಅಥವಾ ಫೋಟೋಗಳಲ್ಲಿ ಕಂಡು ಬಂದಲ್ಲಿ ಮಾರಾಟಗಾರರ ಮತ್ತು ಬಂಕ್ ಮಾಲೀಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ‘ಬಾಟಲ್, ಕ್ಯಾನ್ಗಳಿಗೆ ನೋ ಪೆಟ್ರೋಲ್, ನೋ ಡೀಸೆಲ್. ವಾಹನಗಳಿಗೆ ಮಾತ್ರ ಪೆಟ್ರೋಲ್, ಡಿಸೇಲ್ ಹಾಕಲಾಗುವುದು’ ಎಂಬ ಫಲಕಗಳು ಪೆಟ್ರೋಲ್ ಬಂಕ್ಗಳ ಮುಂದೆ ಕಾಣಿಸಲಾರಂಭಿಸಿವೆ. ಮತ್ತೊಂದೆಡೆ, ದಾಸ್ತಾನಿಲ್ಲದೆ ಕಾಮಾಕ್ಷಿಪಾಳ್ಯದ ಭಾರತ್ ಪೆಟ್ರೋಲ್ ಬಂಕ್ ಮುಚ್ಚಿದ್ದು ಮಂಗಳವಾರ ಕಂಡುಬಂತು.ಈ ಬಗ್ಗೆ ಅಲ್ಲಿನ ಸಿಬ್ಬಂದಿ ಮಾತನಾಡಿ, ‘ಪ್ರತಿ ಮೂರು ದಿನಕ್ಕೊಮ್ಮೆ 15 ಸಾವಿರ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜಾಗುತ್ತಿತ್ತು. ಸಾಲವನ್ನೂ ಕೊಡುತ್ತಿದ್ದರು. ಆದರೆ ಈಗ 7 ಸಾವಿರ ಲೀಟರ್ ಮಾತ್ರ ಸರಬರಾಜಾಗುತ್ತಿದ್ದು ಹಣ ನೀಡುತ್ತೇವೆ ಎಂದರೂ ತೈಲ ಸಿಗುತ್ತಿಲ್ಲ’ ಎಂದು ವಿವರಿಸಿದರು.