ಬ್ಯಾಡಗಿ: ಬಸವೇಶ್ವರರು ಯಾವುದೇ ಒಂದು ಜಾತಿ, ಧರ್ಮ ಅಥವಾ ದೇಶಕ್ಕೆ ಸೀಮಿತವಾದ ದಾರ್ಶನಿಕರಲ್ಲ, ಅವರ ಸಾಮಾಜಿಕ ಸಮಾನತೆಯ ಚಿಂತನೆಗಳು, ಮಾನವೀಯ ಮೌಲ್ಯಗಳು ಮತ್ತು ಸಂದೇಶಗಳು ವಿಶ್ವಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದು ಪಂಚ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಬಸವೇಶ್ವರ ಜಯಂತಿ ಅಂಗವಾಗಿ ಸೋಮವಾರ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಶ್ರಮದ ಶ್ರೇಷ್ಠತೆಯನ್ನು ಸಾರಿದ ಬಸವೇಶ್ವರರು, ದಾಸೋಹ ಪರಿಕಲ್ಪನೆಯ ಮೂಲಕ ಹಂಚಿಕೆ ಮತ್ತು ಸಹಬಾಳ್ವೆಯ ಸಂದೇಶ ನೀಡಿದ ಮಹಾನ್ ಸಮಾಜ ಸುಧಾರಕ ಎಂದು ಬಣ್ಣಿಸಿದರು. ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಮಾತನಾಡಿ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿದ ಬಸವಣ್ಣನವರು ಹಿಂಸೆಯನ್ನು ತ್ಯಜಿಸಿ ಸರಳತೆ, ಸತ್ಯ ಮತ್ತು ಸಮಾನತೆಯ ಬದುಕನ್ನು ಬೋಧಿಸಿದರು. ಅವರ ವಚನಗಳು ಸಮಾಜದ ಬದಲಾವಣೆಗೆ ನಾಂದಿ ಹಾಡಿದ್ದು, ಮೇಲು-ಕೀಳು ಎಂಬ ಅಸಮಾನತೆಯ ಕಂದಕ ತೊಡೆದು ಹಾಕಲು ಬಸವಣ್ಣನವರ ಶ್ರಮ ಅವಿರತವಾಗಿತ್ತು ಎಂದರು. ಈ ವೇಳೆ ಆಶ್ರಯ ಸಮಿತಿ ಸದಸ್ಯ ಮಜೀದ ಮುಲ್ಲಾ, ಶಿವಯೋಗಿ ಗಡಾದ, ಮಾಲತೇಶ ಮಡಿವಾಳರ, ಮಾಲತೇಶ ಮಲ್ಲಾಡದ, ಪುರಸಭೆ ಮಾಜಿ ಸದಸ್ಯರಾದ ಮಹಮ್ಮದ ರಫೀಕ್ ಮುದುಗಲ್, ಮುರಗೆಪ್ಪ ಶೆಟ್ಟರ, ಗುಡ್ಡಪ್ಪ ಆಡಿವನರ, ಶಶಿಧರ ಗೊಲ್ಲರಹಳ್ಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.