ಅನಿಲ ಸೋರಿಕೆ ಕುರಿತು ಅರಿವು ಇರಲಿ

| Published : Jan 08 2025, 01:31 AM IST

ಸಾರಾಂಶ

ಹಿರಿಯೂರು ತಾಲೂಕಿನ ಮಾದೇನಹಳ್ಳಿಯಲ್ಲಿ ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ಅಣಕು ಪ್ರಾತ್ಯಕ್ಷಿಕೆಯನ್ನು ಡಿಸಿ ಟಿ.ವೆಂಕಟೇಶ್ ಹಾಗೂ ಜಿಪಂ ಸಿಒಒ ಎಸ್.ಜೆ.ಸೋಮಶೇಖರ್ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜೆಜೆ.ಹಳ್ಳಿ ಹೋಬಳಿ ದಿಂಡಾವರ ಪಂಚಾಯಿತಿ ವ್ಯಾಪ್ತಿಯ ಮಾದೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ಅಣಕು ಪ್ರಾತ್ಯಕ್ಷಿಕೆ ಕಾರ್ಯಾಚರಣೆ ನಡೆಸಲಾಯಿತು.

ಅನಿಲ ಸೋರಿಕೆ ತಡೆಗಟ್ಟುವಿಕೆಯ ತುರ್ತು ಅಣಕು ಕಾರ್ಯಾಚರಣೆಯನ್ನು ಹಾಸನ-ಚೆರ್ಲಪಲ್ಲಿ ಎಲ್‍ಪಿಜಿ ಪೈಪ್‍ಲೈನ್‍ನ ಎಚ್‍ಸಿಪಿಎಲ್ ಚೈನೇಜ್ 123ರಲ್ಲಿ ಆಫ್‍ಸೈಟ್-ಅಣುಕು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಯಿತು.

ಚಿತ್ರದುರ್ಗ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಹಾಸನದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಹಯೋಗದೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಲವರ್ಧನೆ ಸಂಬಂಧ ಆಯೋಜಿಸಲಾಗಿದ್ದ ಅಣಕು ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಿಸಿ ಮಾತನಾಡಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅನಿಲ ಸೋರಿಕೆ ಸಂದರ್ಭದಲ್ಲಿನ ಬಿಕ್ಕಟ್ಟು ಪರಿಸ್ಥಿತಿಯನ್ನು, ಸಂಭವಿಸುವ ಅನಾಹುತವನ್ನು ಯಾವ ರೀತಿಯಾಗಿ ನಿಭಾಯಿಸುವುದು ಹಾಗೂ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂಬುದನ್ನು ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದರು.

ಅನಿಲ ಸೋರಿಕೆ ದುರಂತದಿಂದ ಸಾಕಷ್ಟು ನಷ್ಟ ಉಂಟಾಗುತ್ತದೆ. ಇಂತಹ ವಿಪತ್ತು ಸಂಭವಿಸಿದಾಗ ಯಾವ ರೀತಿ ಇದನ್ನು ತಡೆಗಟ್ಟಬಹುದು ಎಂಬುದರ ಕುರಿತು ಎಲ್ಲರಿಗೂ ಅರಿವು ಹಾಗೂ ಎಚ್ಚರಿಕೆ ಇರಬೇಕು ಎಂಬ ಕಾರಣದಿಂದ ಅನಿಲ ಸೋರಿಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಪೈಪ್‍ಲೈನ್ ಹಾದುಹೋಗಿರುವ ಎಲ್ಲ ಗ್ರಾಮಗಳಲ್ಲಿಯೂ ಸಹ ನಿರಂತರವಾಗಿ ಅನಿಲ ಸೋರಿಕೆ ಅಣಕು ಪ್ರದರ್ಶನ ಹಮ್ಮಿಕೊಳ್ಳುವುದರಿಂದ ಅರಿವು ಮೂಡಿಸಬಹುದಾಗಿದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನ ಚೀಪ್ ಸ್ಟೇಷನ್ ಮ್ಯಾನೇಜರ್ ಅಭಿಷೇಕ್ ಮಾತನಾಡಿ, ಮಂಗಳೂರು-ಹಾಸನ-ಮೈಸೂರು-ಬೆಂಗಳೂರು-ಚೆರ್ಲಪಲ್ಲಿ ಎಲ್‍ಪಿಜಿ ಪೈಪ್‍ಲೈನ್ ಭಾರತ ಸರ್ಕಾರದ ಅಧೀನ ಸಂಸ್ಥೆಯಾದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನ ಕಂಪನಿಯವರು ನಿರ್ವಹಿಸುತ್ತಿರುವ ಮಹತ್ವಪೂರ್ಣ ರಾಷ್ಟ್ರೀಯ ಯೋಜನೆ. ಈ ಪೈಪ್‍ಲೈನ್ ಮಂಗಳೂರಿನಿಂದ ಎಲ್‍ಪಿಜಿಯನ್ನು ರವಾನೆ ಮಾಡುತ್ತಾ ಹಾಸನದ ಮೂಲಕ ಯಡಿಯೂರು ಹಾಗೂ ಮೈಸೂರು, ಚೆರ್ಲಪಲ್ಲಿಯಲ್ಲಿ ಅಂತ್ಯಗೊಳ್ಳುತ್ತದೆ. ಈ ಪೈಪ್‍ಲೈನ್ ಉದ್ದೇಶವು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಬೆಳೆಯುತ್ತಿರುವ ಎಲ್‍ಪಿಜಿ ಬೇಡಿಕೆ ಪೂರೈಸುವುದಲ್ಲದೇ ಪಶ್ಚಿಮ ಘಟ್ಟ ಮತ್ತು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರ ವ್ಯವಸ್ಥೆಯನ್ನೂ ಸುಗಮಗೊಳಿಸುತ್ತದೆ ಎಂದರು.

ಮಂಗಳೂರು-ಹಾಸನ-ಮೈಸೂರು-ಬೆಂಗಳೂರು-ಚೆರ್ಲಪಲ್ಲಿ ಅನಿಲ ಸೋರಿಕೆ ಉಂಟಾದ ಸಂದರ್ಭದಲ್ಲಿ ಟೋಲ್ ಫ್ರೀ ಸಂಖ್ಯೆ 18001801276 ಹಾಗೂ ಮಂಗಳೂರು ನಿಯಂತ್ರಣ ಕೊಠಡಿ ಮೊಬೈಲ್ ನಂ 8861986057 ಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ತಹಸೀಲ್ದಾರ್ ರಾಜೇಶ್ ಕುಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್, ಪೌರಾಯುಕ್ತ ವಾಸಿಂ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್.ವಿ.ಅಗಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಸಿಪಿಐ ಕಾಳಿಕೃಷ್ಣ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಎಚ್.ಎನ್.ಸಮರ್ಥ್, ಭದ್ರತಾ ಅಧಿಕಾರಿ ಟಿ.ಎಂ.ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.