ಬೆಳ್ತಂಗಡಿ: ಎನ್ಎನ್‌ಎಬಿಎಚ್ ಪುರಸ್ಕೃತ ಉಜಿರೆಯ ಬೆನಕ ಹೆಲ್ತ್ ಸೆಂಟರ್‌ನಲ್ಲಿ ದೇಶ ಕಂಡ ಅಪ್ರತಿಮ ವೈದ್ಯ ಡಾ.ಬಿ.ಎನ್ ರಾಯ್ ಅವರ ಸ್ಮರಣಾರ್ಥ ಬುಧವಾರ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.

ತಾಲೂಕಿನ ಹಿರಿಯ, ಅಳದಂಗಡಿಯಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಡಾ.ಎನ್.ಎಂ.ತುಳಪುಳೆ ಅವರನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿ ಸನ್ಮಾನಿಸಿದರು.ಬಳಿಕ ಮಾತನಾಡಿದ ತುಳಪುಳೆ ಅವರು ಆಸ್ಪತೆಯ ಕಾರ್ಯವೈಖರಿ ಮತ್ತು ನಿಸ್ಪೃಹ ಸೇವೆ ಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ಬೆನಕ ಆಸ್ಪತ್ರೆಯು ರೋಗಿಗಳ ಪಾಲಿನ ಸಂಜೀವಿನಿ ಎಂದರೆ ಅತಿಶಯೋಕ್ತಿಯಲ್ಲ. ಈ ಆಸ್ಪತ್ರೆ ಇನ್ನೂ ಎತ್ತರಕ್ಕೆ ಬೆಳೆದು ಬೆಳ್ತಂಗಡಿ ತಾಲೂಕಿಗಷ್ಟೇ ಅಲ್ಲ, ಸುತ್ತಲಿನ ಪರಿಸರದ ರೋಗಿಗಳಿಗೆ ಇನ್ನೂ ಹೆಚ್ಚಿನ ಸೇವೆ ನೀಡುವಂತಾಗಲಿ ಎಂದರು.ಡಾ. ಗೋಪಾಲಕೃಷ್ಣ ಅವರು, ಪ್ರಸ್ತುತ ಆಸ್ಪತ್ರೆಯು 130 ಹಾಸಿಗೆಗಳನ್ನು ಹೊಂದಿದೆ. ಇದು ಕೇವಲ ನನ್ನೊಬ್ಬನ ಸಾಧನೆಯಲ್ಲ. ಇದು ನಮ್ಮ ತಾಲೂಕಿನ ಮತ್ತು ಸುತ್ತಲಿನ ಪರಿಸರದ ಬಂಧುಗಳು, ತಾಲೂಕಿನ ವೈದ್ಯರು, ನನ್ನ ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳ ಪ್ರೋತ್ಸಾಹ ಮತ್ತು ಸಹಕಾರ ಇವೆಲ್ಲವುಗಳಿಂದ ಸಾಧ್ಯವಾಯಿತು ಎಂದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವ ಡೆಂಗ್ಯೂ ಪೀಡಿತ ಮತ್ತು ಪ್ಲೇಟೇಟ್ ಅತ್ಯಂತ ಕಡಿಮೆಯಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆರ್ಥಿಕವಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನಿಡ್ಲೆ ಗ್ರಾಮದ ಕರಿಯ (50) ಅವರಿಗೆ ಈ ವರ್ಷದ ಉಚಿತ ಚಿಕಿತ್ಸೆಯನ್ನು ಆಸ್ಪತ್ರೆಯ ವತಿಯಿಂದ ನೀಡಲಾಗುವುದೆಂದು ವೈದ್ಯಕೀಯ ನಿರ್ದೇಶಕರು ಪ್ರಕಟಿಸಿದರು. ಡಾ. ಅಂಕಿತಾ ಭಟ್ ಇದ್ದರು. ಡಾ.ಆದಿತ್ಯ ರಾವ್‌ ಪರಿಚಯ ಮಾಡಿದರು. ಡಾ. ಭಾರತಿ ಜಿ.ಕೆ.ವಂದಿಸಿದರು.