ಮೈಸೂರು : ಮೈಸೂರಿನಲ್ಲಿ ಶನಿವಾರ ಸಂಜೆ ಇಹಲೋಕ ತ್ಯಜಿಸಿದ ಖ್ಯಾತ ಗಾಯಕಿ ಎಸ್.ಜಾನಕಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನಗರದ ಬೋಗಾದಿ ರಸ್ತೆಯ ಕಣಿಯನಹುಂಡಿಯಲ್ಲಿ ಭಾನುವಾರ ಸಂಜೆ ನೆರವೇರಲಿದೆ.

ಅಂತ್ಯಸಂಸ್ಕಾರಕ್ಕೂ ಮುನ್ನ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ, ಸಂಜೆ ವೇಳೆಗೆ ಮೈಸೂರು ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ನವೀನ್ ಫಾರಂ ಹೌಸ್ ಗೆ ಮೃತದೇಹ ಕೊಂಡೊಯ್ದು, ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುವುದು.

ಪುತ್ರ ಮುರಳಿಕೃಷ್ಣ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದರು

ಎಸ್. ಜಾನಕಿ ಅವರ ಪುತ್ರ ಮುರಳಿಕೃಷ್ಣ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಮೊಮ್ಮಗಳು (ಮಗನ ಮಗಳು) ಅಪ್ಸರಾ ಅವರು ಅಂತ್ಯಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ನಿಧನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ‘ಎಸ್.ಜಾನಕಿ ಅವರೇ ಮೈಸೂರಿನಲ್ಲಿ ಅಂತ್ಯಸಂಸ್ಕಾರ ನಡೆಯಬೇಕು ಎಂದು ಹೇಳಿದ್ದರು. ಅವರ ಇಚ್ಚೆಯಂತೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಖುದ್ದು ಮುಖ್ಯಮಂತ್ರಿಯವರೇ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೇರವೇರಿಸಿ’ ಎಂದು ಹೇಳಿದ್ದಾರೆ. ಜಾನಕಿ ಕುಟುಂಬಸ್ಥರ ಜೊತೆ ಚರ್ಚಿಸಿದ ಬಳಿಕ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಿರ್ದೇಶನದ ಮೇರೆಗೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಕುಟುಂಬಕ್ಕೆ ಸಿಎಂ ಡಿಕೆಶಿ ಸಾಂತ್ವನ:

ಇದಕ್ಕೂ ಮೊದಲು ಎಸ್.ಜಾನಕಿ ಅವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು. ಬಳಿಕ ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲು ಸೂಚನೆ ನೀಡಿದರು.

ಅಲ್ಲದೆ, ಸರಕಾರದ ಪರವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್‌ ಅವರು ನಿಯೋಜಿಸಿದರು ಎಂದು ತಿಳಿದು ಬಂದಿದೆ.

ಅಂತಿಮ ಯಾತ್ರೆ

- ಇಂದು ಬೆಳಗ್ಗೆ 8ರಿಂದ ಮಹಾರಾಜ ಕಾಲೇಜಲ್ಲಿ ಅಂತಿಮ ದರ್ಶನ

- ಬಳಿಕ ಜಾನಕಿ ಅವರ ಇಚ್ಛೆಯಂತೆ ನಡೆಯಲಿದೆ ಅಂತ್ಯಕ್ರಿಯೆ

- ಮೈಸೂರು ತಾಲೂಕು ಕಣಿಯನಹುಂಡಿಯಲ್ಲಿ ಸಂಸ್ಕಾರ

- ಸಂಜೆ ನವೀನ್ ಫಾರಂ ಹೌಸ್‌ನಲ್ಲಿ ಅಂತಿಮ ವಿಧಿವಿಧಾನ

- ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ