ಕಾಪು: ಇಲ್ಲಿನ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು ಮಂಡ್ಯದ ಬಿ. ಜಿ. ಎಸ್. ಮಹಾ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ನಡೆದ 48 ನೇ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ಅಂಗವಾಗಿ ನಡೆದ ಪೋಸ್ಟರ್ ಪ್ರದರ್ಶನ ಮತ್ತು ಯೋಜನಾ ಪ್ರದರ್ಶನ ಸ್ಪರ್ಧೆಯಲ್ಲಿ ಅತ್ಯುತ್ತಮ ಯೋಜನಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.ಎಐ ಆಧಾರಿತ ಶ್ರವಣ ಸಾಧನ ‘ಹಿಯರ್ ಪ್ಯೂಶನ್’ ಎಂಬ ವಿಜ್ಞಾನ ಮಾದರಿಯನ್ನು ಈ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದು, ಈ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಸಾಮಾನ್ಯ ಶ್ರವಣ ಸಾಧನಗಳು ಸಾಮಾನ್ಯವಾಗಿ ಎಲ್ಲಾ ಶಬ್ಧಗಳನ್ನು ಸಮಾನವಾಗಿ ಕೇಳಿಸುವುದರಿಂದ ಗದ್ದಲದ ವಾತಾವರಣದಲ್ಲಿ ಮಾತುಗಳನ್ನು ಸ್ಪಷ್ಟವಾಗಿ ಗುರುತಿಸುವುದು ಬಳಕೆದಾರರಿಗೆ ಕಷ್ಟಕರವಾಗುತ್ತದೆ. ಇದಕ್ಕೆ ಪರಿಹಾರವಾಗಿ ವಿದ್ಯಾರ್ಥಿಗಳು ಅನಗತ್ಯ ಹಿನ್ನಲೆ ಶಬ್ದವನ್ನು ಕಡಿಮೆ ಮಾಡುತ್ತಾ ಮಾತಿನ ಸ್ಪಷ್ಟತೆಯನ್ನು ಹೆಚ್ಚಿಸುವ ಶ್ರವಣ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.ಈ ಮಾದರಿ ಡಿಜಿಟಲ್ ಸಿಗ್ನಲ್ ಪ್ರೋಸೆಸಿಂಗ್ ತಂತ್ರಜ್ಞಾನವನ್ನು ಬಳಸಿ ಮಾತಿನ ಧ್ವನಿಯನ್ನು ಸ್ಪಷ್ಟಗೊಳಿಸಿ, ಹಿನ್ನೆಲೆಯ ಶಬ್ದವನ್ನು ಕಡಿಮೆ ಮಾಡುವ ಮೂಲಕ ಅತ್ಯಲ್ಪ ವಿಳಂಬದ ಉತ್ತಮ ಗುಣಮಟ್ಟದ ಧ್ವನಿಯನ್ನು ಒದಗಿಸುತ್ತದೆ.ಈ ಯೋಜನೆಯನ್ನು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೂರ್ಣಿತ, ಅನನ್ಯ ಆಚಾರ್ಯ, ಜತ್ತನ್ ಶ್ರದ್ಧಾ ವಸಂತ್ ಮತ್ತು ದೀಪ್ತಿ ಇವರು ವಿಭಾಗದ ಪ್ರಾಧ್ಯಾಪಕರಾದ ಪವಿತ್ರ ಪೂರ್ಣಿಮಾ ಮತ್ತು ರಘುನಾಥ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ.