ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು ಮಠ-ಶ್ರೀ ಕೃಷ್ಣಮಠ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ ಮತ್ತು ಉಡುಪಿ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘಗಳ ಸಹಯೋಗದಲ್ಲಿ ‘ಸಂಸ್ಕೃತ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಜರುಗಿತು. ಪರ್ಯಾಯ ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿ, ಅನುಗ್ರಹ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಉಡುಪಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಲೋಕೇಶ್ ಸಿ., ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ, ಕಾರ್ಕಳದ ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್, ಗುರುವಾಯೂರು ಸಂಸ್ಕೃತ ವಿವಿ ಉಪನ್ಯಾಸಕ ಪ್ರೊ. ಹರಿಪ್ರಸಾದ್ ಕೆ. ಉಪಸ್ಥಿತರಿದ್ದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಡಾ. ರಮೇಶ ಟಿ.ಎಸ್. ಅವರು ವಿಶೇಷ ಉಪನ್ಯಾಸ ನೀಡಿದರು. ವಿದ್ವಾನ್ ಪ್ರಭಾಕರ ಭಟ್ ಸ್ವಾಗತಿಸಿ, ವಿದ್ವಾನ್ ಅಶೋಕ ಹೆಗಡೆ ವಂದಿಸಿದರು. ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ನಿರೂಪಿಸಿದರು.