ಕನ್ನಡಪ್ರಭ ವಾರ್ತೆ ತಿಪಟೂರು
ಭಾರತ ದೇಶ ಸ್ವತಂತ್ರವಾಗಲು ಬ್ರಿಟಿಷರ ವಿರುದ್ಧ ಹೋರಾಡಿದ ಅಸಂಖ್ಯಾತ ಮಹಾನೀಯರ ತ್ಯಾಗ ಬಲಿದಾನವನ್ನು ನಿರಂತರವಾಗಿ ಸ್ಮರಿಸುವ ನೆನಪಿಸಿಕೊಳ್ಳುವ ಕೆಲಸವನ್ನು ನಮ್ಮ ವಿದ್ಯಾರ್ಥಿಗಳು ಹಾಗೂ ಯುವಕರು ನಿರಂತರವಾಗಿ ಮಾಡಬೇಕೆಂದು ಕೆರೆಗೋಡಿ-ರಂಗಾಪುರ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ತಿಳಿಸಿದರು.ತಾಲೂಕಿನ ಕೆರೆಗೋಡಿ-ರಂಗಾಪುರ ಶ್ರೀಮಠದ ಎಸ್ಪಿಎಸ್ ವಿದ್ಯಾಪೀಠದ ಸ್ಥಳೀಯ ಶಾಲಾ ಕಾಲೇಜುಗಳ ವತಿಯಿಂದ ನಡೆದ ೮೦ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೇಶಕ್ಕಾಗಿ ತಮ್ಮ ಜೀವವನ್ನೆ ಪಣಕ್ಕಿಟ್ಟು ಹೋರಾಟ ಮಾಡಿರುವ ಮಹನೀಯರ ತ್ಯಾಗ, ಬಲಿದಾನ ಹಾಗೂ ತತ್ವಾದರ್ಶಗಳನ್ನು ಅಳವಡಿಸಿಕೊಂಡು ರಾಷ್ಟ್ರದ ಏಳಿಗೆಗೆ ಪಣತೊಡಬೇಕು. ಭಾರತ ಯುವಶಕ್ತಿಯ ಮಹಾನ್ ದೇಶವಾಗಿ ವಿಶ್ವಮಂಚೂಣಿಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ದೇಶದ್ರೋಹಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಲವಾರು ವರ್ಷಗಳ ಕಾಲ ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿ ನಮಗೆ ಸ್ವತಂತ್ರ ಬದುಕು ನೀಡಿರುವ ಸದುದ್ದೇಶಕ್ಕೆಕೊಳ್ಳಿ ಇಡುವ ಕೆಲಸಗಳು ಇತ್ತೀಚೆಗೆ ಹೆಚ್ಚುತ್ತಿದ್ದು ಅವುಗಳನ್ನು ಮಟ್ಟ ಹಾಕುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆಹಾರ ವಿಷಯದಲ್ಲಿ ಸ್ವಾವಲಂಬನೆ, ರಕ್ಷಣೆ ವಿಷಯದಲ್ಲಿ ವಿಶ್ವದ ಗಮನ ಸೆಳೆದಿರುವ ನಮ್ಮ ದೇಶದಲ್ಲಿ ಆಂತರಿಕ ಕಚ್ಚಾಟ, ಭಿನ್ನಾಪ್ರಾಯಕ್ಕೆ ಹೆಚ್ಚು ಅವಕಾಶ ನೀಡುತ್ತಿರುವ ಸಂದರ್ಭಗಳು ಆಗಾಗ್ಗೆ ಸೃಷ್ಟಿಯಾಗುತ್ತಿದ್ದು ಇವೆಲ್ಲ ನಿಲ್ಲಬೇಕಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ದಿಗೆ ನಮ್ಮ ಯುವಶಕ್ತಿ ಕಂಕಣತೊಟ್ಟು ಶ್ರಮಿಸುವತ್ತ ಮುನ್ನುಗ್ಗಬೇಕೆಂದು ಶ್ರೀಗಳು ತಿಳಿಸಿದರು. ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಲೋಕೇಶ್ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಬಸವರಾಜ್ ಮಾತನಾಡಿ ,ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಾಕಷ್ಟು ಪುಸ್ತಕಗಳಿದ್ದು ಅವುಗಳನ್ನು ಪಡೆದು ಬಿಡುವು ಮಾಡಿಕೊಂಡು ಓದಿ ಮನದಟ್ಟು ಮಾಡಿಕೊಂಡು ಎಲ್ಲರೂ ದೇಶ ರಕ್ಷಣೆ ಹಾಗೂ ಅಭಿವೃದ್ದಿಗೆ ಕೈಜೋಡಿಸಬೇಕೆಂದು ತಿಳಿಸಿದರು.ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಗಂಗಣ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶಂಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಶಂಕರೇಶ್ವರ ಐಟಿಐ ಕಾಲೇಜಿನ ಪ್ರಿನ್ಸಿಪಾಲರು ಸ್ವಾಗತಿಸಿದರು. ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕರು ವಂದನಾರ್ಪಣೆ ಮಾಡಿದರು. ಮುಖ್ಯ ಶಿಕ್ಷಕರಾದ ಕುಮಾರ್ ರವರು ನಿರೂಪಿಸಿದರು.