ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೈಬಿಟ್ಟ ಕರೆಗಳನ್ನು ಸೇರ್ಪಡೆಸುವಂತೆ ಆಗ್ರಹಿಸಿ ಶಾಸಕ ವೀರೇಂದ್ರ ಪಪ್ಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.ಬೆಂಗಳೂರಿನ ಸಿಎಂ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಶಾಸಕ ವೀರೇಂದ್ರ ಪಪ್ಪಿ ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ ಕೆರೆ, ಕಾಟಿಹಳ್ಳಿ ಕೆರೆ, ಸಿದ್ದಾಪುರ, ಮಾನಂಗಿ, ಹುಲ್ಲೂರು, ತಿಮ್ಮಣ್ಣನಾಯಕನ ಕೆರೆ, ನಂದೀಪುರ ಮತ್ತು ಅನ್ನೇಹಾಳು ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೇರ್ಪಡೆ ಮಾಡಿ ನೀರು ತುಂಬಿಸಬೇಕೆಂದು ವಿನಂತಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ತಾಲೂಕಿನ ಒಟ್ಟು 28966 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸಿ 9 ಕೆರೆಗಳನ್ನು ಮಾತ್ರ ತುಂಬಿಸಲು ಡಿಪಿಆರ್ ನಲ್ಲಿ ಯೋಜಿಸಲಾಗಿದೆ.ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ 3 ಕೆರೆಗಳಾದ ಕಾತ್ರಾಳು ಕೆರೆ, ಮುದ್ದಾಪುರ ಕೆರೆ ಮತ್ತು ಯಳಗೋಡು ಕೆರೆಗಳಿಗೆ ಒಟ್ಟು 0.147 ಟಿಎಂಸಿ ನೀರನ್ನು ತುಂಬಿಸಲು ಜಗಳೂರು ಶಾಖಾ ಕಾಲುವೆ-2 (ಚಿತ್ರದುರ್ಗ ಬ್ಲಾಕ್) ಕಾಮಗಾರಿಯಲ್ಲಿ ಯೋಚಿಸಲಾಗಿರುತ್ತದೆ ಎಂದು ಹೇಳಿದರು.ಆದರೆ ಈ ಮೂರು ಕೆರೆಗಳು ಕರ್ನಾಟಕ ನೀರಾವರಿ ನಿಗಮದಿಂದ ಕೈಗೊಳ್ಳಲಾಗಿರುವ ಭರಮಸಾಗರ ಏತ ನೀರಾವರಿ ಯೋಜನೆಯಲ್ಲಿ ಸೇರ್ಪಡೆಗೊಂಡಿದ್ದು, ಕೆರೆಗಳಿಗೆ ಈಗಾಗಲೇ ಪೈಪ್ ಅಳವಡಿಕೆ ಕಾಮಗಾರಿಯೂ ಕೂಡ ಪೂರ್ಣಗೊಂಡು ನೀರು ತುಂಬಿಸಲಾಗಿದೆ. ಪ್ರಸ್ತುತ ಈ ಮೂರು ಕೆರೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವತಿಯಿಂದ ಕೈಗೆತ್ತಿಕೊಂಡಿರುವುದರಿಂದ ಭದ್ರಾ ಮೇಲ್ದಂಡೆಯಡಿ ಕೈಬಿಡಲು ಈಗಾಗಲೇ ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಠದ ಕುರುಬರಹಟ್ಟಿ ಕೆರೆ, ಕಾಟಿಹಳ್ಳಿ ಕೆರೆ, ಸಿದ್ದಾಪುರ ಕೆರೆ, ಮಾನಂಗಿ ಕೆರೆ, ಹುಲ್ಲೂರು ಕೆರೆ, ತಿಮ್ಮಣ್ಣನಾಯಕನ ಕೆರೆ, ನಂದೀಪುರ ಕೆರೆ ಮತ್ತು ಅನ್ನೇಹಾಳು ಕೆರೆ ಒಟ್ಟು ಎಂಟು ಕೆರೆಗಳು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೇರ್ಪಡೆಯಾಗದೇ ಇರುವುದರಿಂದ ಈ ಭಾಗದ ರೈತರುಗಳು ಹಾಗೂ ಗ್ರಾಮಸ್ಥರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಈ ಭಾಗದ ಗ್ರಾಮಗಳು. ಬರಗಾಲ ಪೀಡಿತ ಪ್ರದೇಶವಾಗಿದ್ದು ಈ ಎಂಟು ಕೆರೆಗಳನ್ನು ತುಂಬಿಸುವುದರಿಂದ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಅಂರ್ತಜಲ ಮಟ್ಟ ಹೆಚ್ಚಾಗುವುದಲ್ಲದೇ ಜನ ಜಾನುವಾರುಗಳಿಗೆ ಕೂಡ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.