ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಅಧಿಕ ಇಳುವರಿ ಪಡೆವ ಸಂಬಂಧ ಜಮೀನಿಗೆ ರಸಗೊಬ್ಬರ ಹಾಗೂ ಕೈ ಚೆಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ. ಬದಲಾಗಿ ಮಣ್ಣಿಗೆ ಏನು ಬೇಕು, ಅದು ಏನು ಬೇಡುತ್ತದೆ, ಅದರ ಆರೋಗ್ಯ ಕಾಪಾಡುವುದು ಹೇಗೆ ಎಂಬುದ ಅರಿಯಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಹೇಳಿದರು.

ತಾಲೂಕಿನ ರಾಮಜೋಗಿಹಳ್ಳಿ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ಪ್ರಾಯೋಜಿತ ಧರ್ತಿ ಮಾತಾ ಬಚಾವೋ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಅಧಿಕವಾಗಿ ಮಣ್ಣಿಗೆ ರಸಗೊಬ್ಬರ ಸೇರ್ಪಡೆ ಮಾಡಿ ಮಣ್ಣಿನ ಆರೋಗ್ಯವನ್ನು ಕೆಡಿಸುತ್ತಿದ್ದಾರೆ. ಇಂತಹ ನಡವಳಿಕೆಗಳಿಗೆ ಇತಿಶ್ರೀ ಹಾಡುವ ಅಗತ್ಯವಿದೆ ಎಂದರು.

ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಇದಾಗಿರುವುದರಿಂದ ಪ್ರತಿ ಪಂಚಾಯಿತಿಯಲ್ಲೂ ರೈತರಿಗೆ ಮಣ್ಣಿನ ಸಂರಕ್ಷಣೆ ಕುರಿತು ಅರಿವು ಮಾಡಿಸುವ ಕೆಲಸ ಮಾಡಲಾಗುತ್ತಿದೆ.ರೈತರು ಪ್ರತಿ ಆರು ತಿಂಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಆ ಮೂಲಕ ಮಣ್ಣಿನಲ್ಲಿರುವ ಕೊರತೆ ಸೇರಿದಂತೆ ಅದರ ಸಾರ ತಿಳಿಯಬೇಕು. ಅತಿಯಾದ ರಸಗೊಬ್ಬರವನ್ನು ಮಣ್ಣಿಗೆ ಹಾಕಿ ಬೆಳೆ ತೆಗೆಯುವ ನಾವುಗಳು ಮಣ್ಣಿನಲ್ಲಿರುವ ಕೊರತೆ ಏನು ಎಂಬುದನ್ನು ತಿಳಿಯದೇ ಸುಖಾಸುಮ್ಮನೆ ಬೇಕಾಗಿದ್ದನ್ನೆಲ್ಲಾ ಹಾಕಿಬಿಡುತ್ತೇವೆ ಎಂದರು.

ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು. ಆಗ ಮಣ್ಣಿನ ಆರೋಗ್ಯ ಕಾಪಾಡಬಹುದಾಗಿದೆ. ಮಣ್ಣಿನ ಪರೀಕ್ಷೆ ಆದ ಮೇಲೆ ಅದಕ್ಕೆ ಬೇಕಾಗುವ ಪೋಷಕಾಂಶ, ಲವಣಗಳು ಸೇರಿದಂತೆ ಯಾವುದರ ಕೊರತೆ ಇದೆ ಎಂಬುದನ್ನು ತಿಳಿದು ಅದನ್ನು ನೀಗಿಸಬಹುದು. ರೈತರು ಇಂತಹ ಕೆಲವು ಸೂಕ್ಷ್ಮಗಳನ್ನು ಅರಿತುಕೊಂಡು ಮಣ್ಣಿನ ಸಂರಕ್ಷಣೆ ಹೊಣೆಯನ್ನು ತಾವುಗಳೇ ಹೊರಬೇಕಾಗಿದೆ.


ಹೆಚ್ಚು ಇಳುವರಿ ಪಡೆಯಬೇಕೆಂಬ ಹಿನ್ನಲೆ ರೈತರು ಸ್ವಯಂ ನಿರ್ಧಾರ ಕೈಗೊಂಡು ರಸಗೊಬ್ಬರ ಸುರಿಯುತ್ತಾರೆ. ಇದು ಕೆಲವ ಬಾರಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅತಿಯಾದ ರಸಗೊಬ್ಬರ ಬಳಕೆ ಕೂಡಾ ಮಣ್ಣಿನ ಸತ್ವ ಕಳೆಯುತ್ತದೆ. ಮಣ್ಣು ಪರೀಕ್ಷೆ ಮಾಡಿಸಿದರೆ ಅದರಲ್ಲಿ ಯಾವ ಅಂಶ ಕೊರತೆಯಿದೆಯೋ ಅದನ್ನು ಗ್ರಹಿಸಿ ಪೋಷಕಾಂಶಯುಕ್ತ ರಸಗೊಬ್ಬರ ಮಿಶ್ರಮ ಮಾಡಬೇಕಾಗುತ್ತದೆ. ಇಂತಹ ವಿಷಯಗಳಿಗೆ ಇಲಾಖೆಯ ಮಾರ್ಗದರ್ಶನ ಸದಾ ಇರುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಣ್ಣು ಕಲುಷಿತವಾದರೆ ನಾವು ಬೆಳೆಯುವ ಎಲ್ಲಾ ಪದಾರ್ಥಗಳೂ ಕಲುಷಿತಗೊಳ್ಳಲಿವೆ ಎಂದು ವಿವರಿಸಿದರು.

ರಾಮಜೋಗಿಹಳ್ಳಿ ಪಂಚಾಯಿತಿಯ ರೈತರು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.