ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಕೋಗೋಡು ಗ್ರಾಮದಲ್ಲಿ 3 ದಿನಗಳಿಂದ ಕಾಡಾನೆಗಳಾದ ಭೀಮ ಮತ್ತು ಕ್ಯಾಪ್ಟನ್ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಈ ಎರಡೂ ದೈತ್ಯಾಕಾರದ ಆನೆಗಳು ಕಾಫಿ ತೋಟಗಳು, ಬೆಳೆ ಪ್ರದೇಶಗಳು ಹಾಗೂ ಅರಣ್ಯ ಅಂಚಿನ ಭಾಗಗಳಲ್ಲಿ ನಿರಂತರವಾಗಿ ಸಂಚರಿಸುತ್ತಿವೆ. ಕೆಲವೆಡೆ ರಾತ್ರಿ ವೇಳೆ ಗ್ರಾಮ ಹತ್ತಿರವೇ ತಂಗಿದ್ದು, ಜನರು ಮನೆಯ ಹೊರಗೆ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಭೀಮ ಮತ್ತು ಕ್ಯಾಪ್ಟನ್ ಆನೆಗಳು ಹಿಂದೆ ಸಹ ಪರಸ್ಪರ ಮುಖಾಮುಖಿಯಾಗಿ ಕಾಳಗ ನಡೆಸಿದ್ದವು. ಕಾಡಾನೆಗಳ ಭೀಕರ ಘರ್ಷಣೆಯಲ್ಲಿ ಭೀಮ ತನ್ನ ಒಂದು ದಂತವನ್ನು ಕಳೆದುಕೊಂಡಿತ್ತು. ಈ ಕಾರಣದಿಂದ ಈ ಎರಡು ಆನೆಗಳು ಹೆಚ್ಚು ಆಕ್ರಮಣಕಾರಿ ಸ್ವಭಾವ ಹೊಂದಿವೆ ಎಂದು ಸ್ಥಳೀಯರು ಭಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರಸ್ತುತ ಕೋಗೋಡು ಭಾಗದಲ್ಲಿ ಜನರ ರಾತ್ರಿ ಸಂಚಾರ ಸಂಪೂರ್ಣ ಕಡಿಮೆಯಾಗಿದೆ. ರೈತರು ಹೊಲಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿದ್ದು, ಆನೆಗಳ ಚಲನೆಯನ್ನು ಡ್ರೋನ್ ಹಾಗೂ ಸಿಬ್ಬಂದಿಯ ಮೂಲಕ ನಿಗಾ ವಹಿಸಲಾಗುತ್ತಿದೆ. ಇದೇ ವೇಳೆ, ಜನರು ಆನೆಗಳ ಹತ್ತಿರ ಹೋಗಬಾರದು, ಫೋಟೋ ಅಥವಾ ವಿಡಿಯೋ ತೆಗೆಯಲು ಪ್ರಯತ್ನಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಗ್ರಾಮಸ್ಥರ ಒತ್ತಾಯ:


ಶೀಘ್ರ ಕುಮ್ಕಿ ಆನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಬೇಕು. ರಾತ್ರಿ ಪೆಟ್ರೋಲಿಂಗ್ ಹೆಚ್ಚಿಸಬೇಕು. ರೈತರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಒಟ್ಟಾರೆ, ಕೋಗೋಡು ಗ್ರಾಮದಲ್ಲಿ ಭೀಮ ಹಾಗೂ ಕ್ಯಾಪ್ಟನ್‌ ಸಂಚಾರದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಪಾಯ ಸಂಭವಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.