ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹತಾಶರಾಗಿದ್ದು ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಖರ್ಗೆ ಅವರದು ಕೀಳುಮಟ್ಟದ ಹೇಳಿಕೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.ಅವರು ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಯುವ ಮೋರ್ಚಾದಿಂದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಲಿತರು, ಬಡವರು, ಮಹಿಳೆಯರು, ಯುವಕರು ಹೀಗೆ ಸಮಾಜದ ಎಲ್ಲ ವರ್ಗದ ಜನರ ಏಳಿಗೆಗಾಗಿ ದುಡಿಯುವ ಮಹಾನ್ ನಾಯಕ ನರೇಂದ್ರ ಮೋದಿ ಅವರು. ಅವರ ಬಗ್ಗೆ ಖರ್ಗೆ ಅವರು ಇಷ್ಟು ಕೀಳುಮಟ್ಟದ ಹೇಳಿಕೆ ನೀಡಬಾರದು ಎಂದರು.ಈ ಹಿಂದೆಯೂ ಖರ್ಗೆ ಅವರು ಮೋದಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡುವುದು ನಂತರ ವಿಷಾದ ವ್ಯಕ್ತಪಡಿಸುವುದು. ಅವರ ಅನುಭವಕ್ಕೆ ಸರಿಯಲ್ಲ. ಇಂತಹುದನ್ನು ಎಲ್ಲ ಭಾರತೀಯರು ಸಹಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ಸಿಗೆ ದೇಶದ ಜನ ಮುಂದೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಪ್ರದಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಕಾರುತ್ತಿರುವ ವೈಷಮ್ಯ ದ್ವೇಷ, ಅಸೂಯೆಗಳು ಹೊಸದೇನಲ್ಲ. ಈ ಮನಸ್ಥಿತಿಯಿಂದಲೇ ದೇಶದ ಹಾಗೂ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸುವ ಮಟ್ಟಕ್ಕೆ ಕಾಂಗ್ರೆಸ್ ಕುಸಿದಿರುವುದನ್ನೂ ದೇಶದ ಜನ ಕಂಡಿದ್ದಾರೆ. ಮೋದಿಜಿಯವರನ್ನು ವಿರೋಧಿಸುವ ಭರದಲ್ಲಿ ನೀವು ಭಾರತದ ಗೌರವವನ್ನು ಕುಗ್ಗಿಸುತ್ತಿದ್ದಿರಿ. ಜನ ನಿಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎನ್ನುವುದು ನಿಮಗೆ ನೆನಪಿರಲಿ ಎಂದರು.ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಸರ್ಜಿಕಲ್ ಸ್ಟ್ರೈಕ್, ಬಾಲಕೋಟೆ ಏರಸ್ಟ್ರೈಕ್ ಮತ್ತು ಇತ್ತೀಚಿನ ಅಪರೇಷನ್ ಸಿಂಧೂರ, ತ್ರಿವಳಿ ತಲಾಖ್, ಆರ್ಟಿಕಲ್ 370 ಇವುಗಳ ಬಗ್ಗೆ ಕಾಂಗ್ರೆಸ್ ಮೊದಲಿನಿಂದಲೂ ವಿರೋಧಿಸುತ್ತ ಬಂದಿದೆ. ಖರ್ಗೆ ಅವರು ಹತಾಶರಾಗಿದ್ದಾರೆ. ಅವರು ತಮ್ಮ ನೇತೃತ್ವ ತೃಪ್ತಿಪಡಿಸಲು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಜನರು ಕೂಡ ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಅವಹೇಳನಕಾರಿ ರಾಜಕೀಯಕ್ಕೆ ಮುಂಬರುವ ದಿನಗಳಲ್ಲಿ ನಾಡಿನ ಜನರೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ವಿಧಾನ ಪರಿಷತ್ತ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಕಾಂಗ್ರೆಸ್ಸಿನ ಎಲುಬಿಲ್ಲದ ನಾಲಿಗೆ ಅನಾವರಣವಾದಿಜೆಯ ವಿಷಕಾರಿ ಸಂಸ್ಕೃತಿ, ಹತಾಶೆಯ ಪರಾಕಾಷ್ಟೆ ತಲುಪಿರುವ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಕಳಚಿದೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಒಂದೆಡೆ 140 ಕೋಟಿ ಭಾರತೀಯರು ಮೆಚ್ಚಿದ ಪ್ರಧಾನಿಗೆ ಭಯೋತ್ಪಾದಕ ಎಂದು ಕರೆಯುವ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಮತಿ ಭ್ರಮಮಣೆಯಾಗಿದೆ. ದೇಶದ ಪ್ರಧಾನಿಗೆ ಉಗ್ರಪಟ್ಟ, ನಾರಿ ಶಕ್ತಿ ಚಾರಿತ್ರ್ಯ ಹರಣ, ಮಹಿಳೆಯರಿಗೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವುದೇ ಕಾಂಗ್ರೆಸ್ಸಿನ ಅಸಲಿ ಗ್ಯಾರಂಟಿಯಾಗಿದೆ. ವಿನಾಶಕಾಲೇ ವಿಪರೀತ ಬುದ್ಧಿ. ಈ ವಿಷಕಾರಿ ರಾಜಕಾರಣಕ್ಕೆ ಧಿಕ್ಕಾರವಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮುತ್ತಣ್ಣ ಬೇಣ್ಣೂರ, ವಿದ್ಯಾಧರ ಸವದಿ, ಭುವನೇಶ ಪೂಜಾರ, ಬಸವರಾಜ ಹುನಗುಂದ, ಸುರೇಶ ಕೋಣ್ಣೂರ, ಚಂದ್ರು ರಾಮೋಡಗಿ, ಶಿವು ಸಿಕ್ಕೇರಿ, ಶ್ರೀಧರ ನಾಗರಬೆಟ್ಟ, ಸುರೇಶ ಮಜ್ಜಗಿ, ಸಿದ್ದೇಶ ಜಿರ್ಲಿ, ರವಿ ಧಾಮಜಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು