ಕನ್ನಡಪ್ರಭ ವಾರ್ತೆ ಬೆಳಗಾವಿ

ಹನ್ನೆರಡನೆಯ ಶತಮಾನ ಸಮಾನತೆಗೆ ಕರೆ ನೀಡಿದ ಕಾಲಘಟ್ಟ. ಅದರ ನೇತೃತ್ವ ವಹಿಸಿದ ವಿಶ್ವಗುರು ಬಸವಣ್ಣನವರು ಸಮಾಜವನ್ನು ಸಮಾನತೆಯ ತಳಹದಿಯ ಮೇಲೆ ರೂಪಿಸಿದರು. ನಮ್ಮಿಂದ ಇಂದಿಗೂ ಸಾಧ್ಯವಾಗದ್ದು ಬಸವಣ್ಣನವರು ಅಂದು ಸಾಧಿಸಿ ತೋರಿಸಿದ್ದರು. ಅವರ ಕೊಡುಗೆ ಚಿರಸ್ಮರಣೀಯ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಹೇಳಿದರು.

ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಶಿವಬಸವ ನಗರದಲ್ಲಿ ಬಸವ ಜಯಂತಿ ಉತ್ಸವ ನಿಮಿತ್ತ ಅಮವಾಸ್ಯೆ ಅನುಭಾವ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬಸವಣ್ಣನವರು ಲಿಂಗ, ವರ್ಗ, ವರ್ಣದಲ್ಲಿ ಸಮಾನತೆ ಮೂಡಿಸಿದರು. ಸ್ತ್ರೀಕುಲೋದ್ಧಾರಕರು ಶರಣರು. ಇಂದಿಗೂ ಜಾತಿ ಧರ್ಮಗಳ ತಾಕಲಾಟದಲ್ಲಿ ನಾವು ಬೇಯುತ್ತಿದ್ದೇವೆ. ಪರಸ್ಪರರಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ಅನೇಕ ಜಾಡ್ಯಗಳ ಮಧ್ಯೆ ಬದುಕುತ್ತಿರುವ ನಾವು ಶರಣರ ವಚನಗಳನ್ನು ಅವಲೋಕಿಸಬೇಕಾಗಿದೆ. ಅದರಲ್ಲಿಯೂ ಬಸವಣ್ಣವರ ವಚನಗಳು ನಮ್ಮ ಜೀವನಕ್ಕೆ ಒಂದು ದಿವ್ಯವಾದ ಸಂದೇಶವನ್ನು ನೀಡುತ್ತವೆ. ಯುವಜನಾಂಗ ಅವುಗಳನ್ನು ಅರಿತುಕೊಂಡು ಸತ್‌ಪಥದಲ್ಲಿ ಸಾಗಬೇಕು ಎಂದು ಕರೆ ನೀಡಿದರು.

ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಬಸವ ಜಯಂತಿ ಉತ್ಸವ ಒಂದು ದಿನದ ಆಚರಣೆಯಾಗದೆ ನಿತ್ಯ ಬದುಕಿನ ಸೂತ್ರವಾಗಬೇಕು. ಅವರ ಜೀವನ ಸಂದೇಶವನ್ನು ನವಸಮಾಜದಲ್ಲಿ ಮೂಡಿಸಿಕೊಳ್ಳುವುದು ಅಗತ್ಯವಾಗಿದೆ. ಮಹಾಸಭೆಯು ಹಲವಾರು ರಚನಾತ್ಮಕವಾದ ಕಾರ್ಯಕ್ರಮ ಸಂಯೋಜಿಸಿ ಯುವಪ್ರತಿಭೆಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.

ಕಾರಂಜಿಮಠ ಗುರುಸಿದ್ಧ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.


ಈ ವೇಳೆ ಮೇಯರ್‌ ಪ್ರೀತಿ ಕಾಮಕರ ಹಾಗೂ ಉಪ ಮೇಯರ್ ಹನುಮಂತ ಕೊಂಗಾಲಿ ಅವರನ್ನು ಸತ್ಕರಿಸಲಾಯಿತು. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು. ವಿದ್ಯಾ ಗೌಡರ ನಿರೂಪಿಸಿದರು. ಬಾಲಚಂದ್ರ ಬಾಗಿ ಸ್ವಾಗತಿಸಿದರು. ಡಾ.ಎಫ್‌.ವಿ.ಮಾನ್ವಿ, ವಿ.ಕೆ.ಪಾಟೀಲ, ಗುರುದೇವ ಪಾಟೀಲ, ಮಹಾನಂದಾ ಲೋಕನಣ್ಣವರ, ಬಸವರಾಜ ಮಾದಗೌಡ, ಕಿರಣ ಅಗಡಿ ಉಪಸ್ಥಿತರಿದ್ದರು.