ಸಾರಾಂಶ
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಂಘಟನೆ ಬಗ್ಗೆ ಚಟುವಟಿಕೆಗಳು ಆರಂಭಗೊಂಡಿದ್ದು, ಮಂಗಳವಾರದಿಂದ ಮೂರು ದಿನಗಳ ಕಾಲ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ಸರಣಿ ಸಭೆಗಳು ನಡೆಯಲಿವೆ
ಕೊನೆಯ ದಿನವಾದ ಗುರುವಾರ ರಾಜ್ಯದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಯಲಿದ್ದು, ಪಕ್ಷ ಸಂಘಟನೆಯ ಮುಂದಿನ ಕಾರ್ಯಕ್ರಮಗಳ ರೂಪರೇಷೆ ನಿರ್ಧರಿಸುವ ಸಾಧ್ಯತೆಯಿದೆ.ಬಹುದಿನಗಳ ನಂತರ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ರಾಜ್ಯದ ಸಂಘಟನೆಯತ್ತ ಗಮನಹರಿಸಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಅಗರ್ವಾಲ್ ಅವರು ಮಂಗಳವಾರದಿಂದ ಸರಣಿ ಸಭೆಗಳ ನೇತೃತ್ವ ವಹಿಸಲಿದ್ದಾರೆ.
ಪರಿಶಿಷ್ಟ ವರ್ಗದ ಒಳಮೀಸಲಾತಿ ಸಮೀಕ್ಷೆ ಹಿನ್ನೆಲೆಯಲ್ಲಿ ಎಡ ಮತ್ತು ಬಲ ಗುಂಪಿನ ಮುಖಂಡರ ಸಭೆ ನಡೆಸಲಿದ್ದಾರೆ. ಜತೆಗೆ ಮಹಿಳಾ ಮತ್ತು ಯುವ ಮೋರ್ಚಾ ಸೇರಿದಂತೆ ವಿವಿಧ ವರ್ಗಗಳ ಮುಖಂಡರು.
ಶಾಸಕರ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದೇ ವೇಳೆ ಆಪರೇಷನ್ ಸಿಂದೂರ ಯಶಸ್ಸಿನ ಕುರಿತಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪಕ್ಷದ ಹಿರಿಯ ನಾಯಕರನ್ನು ಎಲ್ಲ ಜಿಲ್ಲೆಗಳಿಗೂ ಭಾಷಣಕ್ಕಾಗಿ ಕಳುಹಿಸಲಾಗುತ್ತದೆ. ಈ ಸಂಬಂಧ ಗುರುವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.