ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಪೆಇಲ್ಲಿನ ಕುಂದಾಪುರ ಬಳಿ ಅರಬ್ಬಿ ಸಮುದ್ರದಲ್ಲಿ ಹಾನಿಗೀಡಾಗಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ಬೋಟ್ ಮತ್ತು ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ.ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಲ್ಲಿನ ಕಲ್ಮಾಡಿಯ ಪ್ಯಾರು ಎಸ್. ಎಂಬವರ ಒಡೆತನ ಈ ಅಜ್ಮೇರ್ ಎನ್ನುವ ಬೋಟಿನ ತಳಭಾಗವು ಒಡೆದು ನೀರು ಒಳನುಗ್ಗಲಾರಂಭಿಸಿತು. ಅದರಲ್ಲಿದ್ದ ಮೀನುಗಾರರು ಕರಾವಳಿ ಭದ್ರತಾ ಪೊಲೀಸ್ಗೆ ಮಾಹಿತಿ ನೀಡಿತ್ತು. ಪೊಲೀಸರು ಭಾರತೀಯ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು.ಅದರಂತೆ ಕ.ಕಾ.ಪಡೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಸಮುದ್ರದಲ್ಲಿ ಗಸ್ತಿನಲ್ಲಿದ್ದ ಕರಾವಳಿ ಕಾವಲು ಪಡೆಯ ರಾಜ್ದೂತ್ ಮತ್ತು ಗೋಲ್ಡ್ ಫಿಶ್ ಎಂಬ ಎರಡು ನೌಕೆಗಳ ಸಹಾಯದಿಂದ ಸಬ್ಮರ್ಸಿಬಲ್ ಪಂಪ್ಗಳನ್ನು ಬಳಸಿಕೊಂಡು ಮೀನುಗಾರಿಕಾ ಬೋಟಿನೊಳಗೆ ತುಂಬುತ್ತಿದ್ದ ನೀರನ್ನು ಖಾಲಿ ಮಾಡಲಾಯಿತು.ನಂತರ 4 ಗಂಟೆಗೆ ಕರವಾಳಿ ಕಾವಲು ಪಡೆಯ ಎರಡು ನೌಕೆಗಳ ಬೆಂಗಾವಲಿನಲ್ಲಿ ಅಜ್ಮೇರ್ ಬೋಟನ್ನು ಸಮೀಪದ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಎಳೆದು ತರಲಾಯಿತು. ಬೋಟಿನಲ್ಲಿದ್ದ 6 ಮಂದಿ ಮೀನುಗಾರರು ಸುರಕ್ಷಿತರಾಗಿದ್ದಾರೆ.