ಚಿತ್ರದುರ್ಗ: ಚುನಾವಣೆ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ ಚಿಕ್ಕಪುರ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಜಯಮ್ಮ.ಕೆ.ಬಿ, ತೋಪುರ ಮಾಳಿಗೆ ಸರ್ಕಾರಿ ಹಿರಿಯ ಶಾಲೆ ಸಹ ಶಿಕ್ಷಕಿ ರೂಪಾ.ಎಸ್, ಮಠದ ಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೈಹಿಕ ಶಿಕ್ಷಕರಾದ ಕೆ.ಗಿರಿಜಮ್ಮ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಮೂನೆ-6 ಮತ್ತು 7ರ ಪರಿಶೀಲನೆ, 85 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರೀಕರಿಗೆ ಮತ್ತು ವಿಕಲಚೇತನ ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಕಾರ್ಯ ಹಾಗೂ ಎಪಿಕ್ ಕಾರ್ಡ್ಗಳ ವಿತರಣೆ ಕೆಲಸಗಳು ಅತ್ಯಂತ ತುರ್ತಾಗಿ ನಿರ್ವಹಿಸಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಅಮಾನತುಗೊಂಡ ಮೂವರು ಶಿಕ್ಷಕಿಯರನ್ನು ಮತಗಟ್ಟೆ ಅಧಿಕಾರಿಗಳಾಗಿ (ಬಿಎಲ್ಓ) ಕರ್ತವ್ಯಕ್ಕೆ ನೇಮಿಸಿ ಆದೇಶಿಸಲಾಗಿತ್ತು. ಕರ್ತವ್ಯಕ್ಕೆ ಹಾಜರಾಗದೆ, ಇಲ್ಲ ಸಲ್ಲದ ಸಬೂಬು ಹೇಳಿ 3 ಶಿಕ್ಷಕಿಯರು ಲೋಪ ಎಸಗಿದ್ದಾರೆ ಎಂದು ಉಪವಿಭಾಗಾಧಿಕಾರಿ ವರದಿ ಸಲ್ಲಿಸಿದ್ದರು.ವರದಿಯನ್ನಾಧರಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮೂವರು ಶಿಕ್ಷಕಿಯರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಚುನಾವಣೆ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಯಾವುದೇ ಮೂಲಾಜು ಇಲ್ಲದೆ ಕಠಿಣಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.