ಬಂಟ್ವಾಳ: ಕಟಪಾಡಿ–ಉಳ್ಳಾಲ ಅಬ್ಬಕ್ಕ ಸರ್ಕಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿ (ಎಸ್.ಎಚ್ 300)ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಂತೆ ತಾಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ನೀಡಿದ ಮನವಿಯಲ್ಲಿ, ಕಟಪಾಡಿಯಿಂದ ಪ್ರಾರಂಭವಾಗಿ ಕಾರ್ಕಳ, ಮೂಡಬಿದಿರೆ, ಸಿದ್ದಕಟ್ಟೆ, ಬಂಟ್ವಾಳ, ಮೆಲ್ಕಾರ್, ಮುಡಿಪು ಮಾರ್ಗವಾಗಿ ಉಳ್ಳಾಲ ಅಬ್ಬಕ್ಕ ಸರ್ಕಲ್ ವರೆಗೆ ಸಾಗುವ ಎಸ್.ಎಚ್ 300 ರಾಜ್ಯ ಹೆದ್ದಾರಿಯಲ್ಲಿ ದಿನಂಪ್ರತಿ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಆದರೆ ರಸ್ತೆ ಬಹುತೇಕ ಸ್ಥಳಗಳಲ್ಲಿ ಕಿರಿದಾಗಿದ್ದು, ತಿರುವುಗಳು ಹೆಚ್ಚಿರುವುದರಿಂದ ಸುಗಮ ಹಾಗೂ ವೇಗದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ರಸ್ತೆ ಹಿಂದೆ ಎರಡು ಬಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಘೋಷಣೆ ಮಾಡಿ ಶಂಕುಸ್ಥಾಪನೆ ಕೂಡ ನಡೆದಿರುವುದಾಗಿ ತಿಳಿದುಬಂದಿದೆ. ಆದರೆ ನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಆಸಕ್ತಿಯ ಕೊರತೆಯಿಂದಾಗಿ ಯೋಜನೆ ಅನುಷ್ಠಾನಕ್ಕೆ ಬಾರದಿದ್ದು, ರಸ್ತೆ ರಾಜ್ಯ ಹೆದ್ದಾರಿಯಾಗಿಯೇ ಮುಂದುವರಿದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಮುಖ್ಯವಾಗಿ ಬಂಟ್ವಾಳ–ಮೂಡುಬಿದಿರೆ ಭಾಗದ ರಸ್ತೆ ಅತ್ಯಂತ ಕಿರಿದಾಗಿದ್ದು, ಹಲವೆಡೆ ಅಪಾಯಕಾರಿ ತಿರುವುಗಳು ಇರುವುದರಿಂದ ಅಪಘಾತಗಳ ಭೀತಿ ಹೆಚ್ಚಾಗಿದೆ. ವ್ಯಾಪಾರ, ಶಿಕ್ಷಣ ಹಾಗೂ ತುರ್ತು ವೈದ್ಯಕೀಯ ಸೇವೆಗಳ ದೃಷ್ಟಿಯಿಂದಲೂ ಈ ಮಾರ್ಗದ ಮಹತ್ವ ಹೆಚ್ಚಾಗಿದೆ ಎಂದು ಪ್ರಭಾಕರ ಪ್ರಭು ತಿಳಿಸಿದ್ದಾರೆ.

ಮನವಿಯ ಪ್ರತಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಖ್ಯ ಎಂಜಿನಿಯರ್, ಕೆ.ಆರ್. ಸರ್ಕಲ್, ಬೆಂಗಳೂರು ಹಾಗೂ ಲೋಕೋಪಯೋಗಿ ಇಲಾಖೆ ಕಾರ್‍ಯದರ್ಶಿ, ವಿಕಾಸ ಸೌಧ, ಬೆಂಗಳೂರು ಅವರಿಗೆ ಕಳುಹಿಸಲಾಗಿದೆ.