ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅನ್ಯಕೋಮಿನ ವ್ಯಕ್ತಿಯ ಪ್ರೇಮಪಾಶಕ್ಕೆ ಸಿಲುಕಿ ಮತಾಂತರಗೊಂಡು ಮದುವೆ ಆಗಿದ್ದ ವಿಚ್ಛೇದಿತ ಮಹಿಳೆ ಈಗ ಆತನಿಂದಲೂ ಮೋಸ ಹೋಗಿ ಬೀದಿಗೆ ಬಂದಿದ್ದು, ನನಗೆ ನ್ಯಾಯ ಕೊಡಿಸಬೇಕೆಂದು ಬಾಗಲಕೋಟೆ ಎಸ್ಪಿ ಅವರ ಬಳಿ ಅಂಗಲಾಚಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಘಟನೆ ನಡೆದಿದೆ. ಸವಿಪ್ ಎನ್ನುವ ವ್ಯಕ್ತಿಯಿಂದ ಮೋಸವಾಗಿದೆ ಎಂದು ಆರೋಪಿಸಿರುವ ಶ್ರೀದೇವಿ 14 ವರ್ಷದ ಹಿಂದೆ ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದೆ, ಬಳಿಕ ಸವಿಪ್ ಎಂಬ ಮುಸ್ಲಿಂ ವ್ಯಕ್ತಿ ತನಗೆ ಕೊಲೆ ಬೆದರಿಕೆ ಹಾಕಿ ಬಲವಂತದಿಂದ ಮದುವೆ ಆಗಿದ್ದಾರೆಂದು ಆರೋಪಿಸಿದ್ದಾಳೆ.

ಮೊದಲ ಗಂಡನಿಂದ ಡೈವರ್ಸ್‌ ಪಡೆದಿದ್ದ ಮಹಿಳೆ ಸವೀಪ್ ನ ಹಿಂದೆ ಹೋಗಿ ಮತಾಂತರಗೊಂಡು ಹಬೀಬಾ ಎಂದು ಹೆಸರು ಬದಲಿಸಿಕೊಂಡು ಎರಡನೇ ಮದುವೆಯಾಗಿದ್ದಳು. ಕೆಲದಿನಗಳ ಕಾಲ ಸವಿಪ್‌ನೊಂದಿಗೆ ಜೀವನ ನಡೆಸಿದ್ದ ಮಹಿಳೆ ಶ್ರೀದೇವಿ ಅಲಿಯಾಸ್ ಹಬೀಬಾ, ಮೊದಲ ಪತಿಯಿಂದ ಬಂದಿದ್ದ ಜೀವನಾಂಶದ ಹಣ ಸೇರಿ ಚಿನ್ನಾಬರಣ ಸಹ ಕಸಿದುಕೊಂಡು ಹೋಗಿದ್ದಾನೆಂದು ಸವಿಪ್ ವಿರುದ್ಧ ಆರೋಪ ಮಾಡಿದ್ದು, ನ್ಯಾಯ ಕೊಡಿಸಲು ಮನವಿ ಮಾಡಿದ್ದಾಳೆ.

ಸವಿಪ್ ವಿರುದ್ಧ 4 ಲಕ್ಷ ಹಣ ಮತ್ತು 4 ತೊಲೆ ಚಿನ್ನ ಕದ್ದುಕೊಂಡು ಹೋಗಿರೋ ಆರೋಪ ಮಾಡಿರುವ ಮಹಿಳೆ, ಇತ್ತ ಮೊದಲ ಗಂಡನ ನೆಲೆಯೂ ಇಲ್ಲ, ಅತ್ತ ಮತಾಂತರವಾಗಿ ಎರಡನೇ ಮದುವೆಯಾಗಿದ್ದವನಿಂದಲೂ ಮೋಸವಾಗಿದೆ, ನನಗೆ ಹಣ ಮತ್ತು ಬಂಗಾರ ಕೊಡಿಸಿ. ಆರೋಪಿ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ. ಬಾಗಲಕೋಟೆ ಎಸ್ಪಿಗೆ ಕಚೇರಿಗೆ ಬಂದು ನ್ಯಾಯ ಕೇಳಿರುವ ಮಹಿಳೆಗೆ ಎರಡು ಮಕ್ಕಳು ಸಹ ಇದ್ದು, ಈಗ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಗೆ ಒಳಗಾಗಿದ್ದಾಳೆ.

ಕಿರಕುಳದ ಬಗ್ಗೆ ಪರಿಶೀಲನೆ: ಎಸ್ಪಿ


ಎಸ್ಪಿ ಕಚೇರಿಗೆ ಬಂದು ದೂರು ನೀಡಿರೋ ಬೆನ್ನಲ್ಲೇ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿ, ಮಹಿಳೆ ತಮಗಾಗಿರೋ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಕಚೇರಿಗೆ ಬಂದಿದ್ದಾರೆ. ಒಬ್ಬ ವ್ಯಕ್ತಿಯಿಂದ ಕಿರಿಕಿರಿ ಆಗಿದೆ ಎಂದು ಹೇಳುತ್ತಿದ್ದಾರೆ, ಕಂಪ್ಲೇಂಟ್ ಕೊಡೋಕೆ ಹೋದರೆ ಆಗಿಲ್ಲಂತ ಹೇಳುತ್ತಿದ್ದಾರಂತೆ, ಮುಧೋಳ ಠಾಣೆಯಲ್ಲಿ ಕೇಸ್ ದಾಖಲಿಸಿ, ಅವರಿಗೆ ಪತಿಯಿಂದ ಆಗಿರುವ ಕಿರಕುಳ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಮುಧೋಳ ಠಾಣೆಯಲ್ಲೂ ಪ್ರಕರಣ ದಾಖಲಿಸುತ್ತೇವೆ. ನಮ್ಮಲ್ಲಿ ಮಹಿಳೆಯರಿಗಾಗಿ ಠಾಣೆಯೂ ಇದೆ ಅಲ್ಲಿಯೂ ಹೇಳುತ್ತೇವೆ. ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದ ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.