ಕನ್ನಡಪ್ರಭ ವಾರ್ತೆ ಕಬ್ಬೂರ

ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ಯುವಕ ಯುಪಿಎಸ್ಸಿಯಲ್ಲಿ ಅಪ್ರತಿಮ ಸಾಧನೆ ಮೆರೆದಿದ್ದಾನೆ. 739ನೇ ರ‍್ಯಾಂಕ್ ಪಡೆಯುವ ಮೂಲಕ ಐದನೇ ಪ್ರಯತ್ನದಲ್ಲಿ ತಮ್ಮ ಗುರಿ ತಲುಪಿದ್ದಾರೆ. ಮೂಲತಃ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದ ಬಸವರಾಜ ಮಡಿವಾಳಪ್ಪ ಪಾಟೀಲ(28) ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದವರು. ಬಸವರಾಜ್‌ ತಂದೆ ಮಡಿವಾಳಪ್ಪ ಪಾಟೀಲ ಅವರು ನಿವೃತ್ತ ಶಿಕ್ಷಕರು. ತಾಯಿ ಶಾಂತವ್ವ ಗೃಹಿಣಿ. ಓರ್ವ ಸಹೋದರಿ ತೇಜಸ್ವಿನಿ ಶಿಕ್ಷಕಿಯಾಗಿದ್ದು, ಮತ್ತೋರ್ವ ಸಹೋದರಿ ಜ್ಯೋತಿ ಸ್ಪರ್ಧಾತ್ಮಕ‌ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.ಚಿಕ್ಕೋಡಿ ತಾಲೂಕಿನ ಕಬ್ಬೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಬಸವರಾಜ ಪಾಟೀಲ, 6-10ನೇ ತರಗತಿಯನ್ನು ಕೋಥಳಿ ಜವಾಹರ ನವೋದಯ ವಿದ್ಯಾಲಯದಲ್ಲಿ, ಪಿಯುಸಿಯನ್ನು ಧಾರವಾಡದ ಎಸ್​ಡಿಎಂ ಕಾಲೇಜಿನಲ್ಲಿ ಮುಗಿಸಿದ್ದಾರೆ. 2019ರಲ್ಲಿ ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಬಸವರಾಜ್ ಪಾಟೀಲ, ಯಾವುದೇ ಕಂಪನಿಗೆ ಕೆಲಸಕ್ಕೆ ಸೇರದೇ ಯುಪಿಎಸ್​​​ಸಿ ಪರೀಕ್ಷೆಗೆ ಸಿದ್ಧತೆ ಶುರು ಮಾಡಿದರು. ದೆಹಲಿಯಲ್ಲಿ ಕೋಚಿಂಗ್ ಮುಗಿಸಿ, ಬೆಂಗಳೂರಿನಲ್ಲೇ ಉಳಿದು ಅಭ್ಯಾಸ ಮಾಡುತ್ತಿದ್ದರು. ಒಟ್ಟು ಐದು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿರುವ ಬಸವರಾಜ, ನಾಲ್ಕು ಬಾರಿ ಪ್ರಿಲಿಮ್ಸ್ ಪಾಸ್ ಆಗಿದ್ದರು. ಆದರೆ, ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಹೇಗಾದರೂ ಮಾಡಿ ಈ ಸಲ ಪಾಸ್ ಆಗಲೇಬೇಕು ಅಂದುಕೊಂಡು ಪರೀಕ್ಷೆ ಬರೆದಿದ್ದ ಬಸವರಾಜ, ಐದನೇ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ.ನಾನು ನಿತ್ಯ 8-10 ಗಂಟೆ ಓದುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ಹೆಚ್ಚು ಓದುತ್ತಿದ್ದೆ. ನಾಲ್ಕು ಬಾರಿ ವಿಫಲವಾದರೂ ತಾಳ್ಮೆ ಕಳೆದುಕೊಂಡಿರಲಿಲ್ಲ. ನಿರಂತರ ಓದು ಮುಂದುವರಿಸಿದ್ದೆ. ಕಠಿಣ ಪರಿಶ್ರಮ, ಸತತ ಅಭ್ಯಾಸ ನನ್ನ ಕೈ ಹಿಡಿಯಿತು. ಕೊನೆಯ ಅವಕಾಶ ಬಳಸಿಕೊಂಡು ಮತ್ತೊಮ್ಮೆ ಪರೀಕ್ಷೆ ಬರೆದು, ಐಎಎಸ್ ಕನಸು ನನಸು ಮಾಡಿಕೊಳ್ಳುತ್ತೇನೆ. ಯುಪಿಎಸ್ಸಿ ಬರೆಯುವವರಿಗೆ ತಾಳ್ಮೆ, ಸ್ಮಾರ್ಟ್ ವರ್ಕ್ ಮಾಡುವ ಛಾತಿ ಇರಬೇಕು. ತಾಳ್ಮೆ ಇದ್ದರೆ ತಡವಾದರೂ ಯಶಸ್ಸು ಸಿಕ್ಕೆ ಸಿಗುತ್ತದೆ ಎಂದು ಬಸವರಾಜ ಪಾಟೀಲ ನಂಬಿದ್ದಾರೆ.

ಕೋಟ್‌ನನಗೆ 739ನೇ ರ‍್ಯಾಂಕ್ ಸಿಕ್ಕಿದೆ. ಇನ್ನೂ ಒಳ್ಳೆಯ ರ‍್ಯಾಂಕ್ ಸಿಗುವ ನಿರೀಕ್ಷೆ ಇತ್ತು. ಆದರೂ, ಯುಪಿಎಸ್​​ಸಿ ಪಾಸ್ ಆಗಿರುವುದಕ್ಕೆ ತುಂಬಾ ಸಂತೋಷ ಆಗುತ್ತಿದೆ. ನನ್ನ ಈ ಸಾಧನೆಯನ್ನು ತಂದೆ-ತಾಯಿ ಮತ್ತು ಸಹೋದರಿಯರಿಗೆ ಅರ್ಪಣೆ ಮಾಡುತ್ತೇನೆ. ಕುಟುಂಬಸ್ಥರು, ಸ್ನೇಹಿತರು ಸಾಕಷ್ಟು ಸಹಕಾರ ಕೊಟ್ಟರು. ಅವರಿಗೆಲ್ಲ ನಾನು ಕೃತಜ್ಞತೆ ಸಲ್ಲಿಸುತ್ತೇನೆ.ಬಸವರಾಜ್‌ ಪಾಟೀಲ, ಯುಪಿಎಸ್ಸಿ ಸಾಧಕ ------

ಕೋಟ್‌ನಾವು ಶಿಕ್ಷಕ ಕಾಯಕದಲ್ಲಿ ಮಾಡಿದ ಶ್ರಮ ಪ್ರತಿಫಲ ನಮ್ಮ ಮಕ್ಕಳಿಗೆ ಸಿಗುತ್ತದೆ. ಸರಕಾರಿ ಶಾಲೆಗಳೆಂದರೆ ಅಸಡ್ಡೆ ಭಾವನೆಯಿಂದ ನೋಡುವವರಿಗೆ ನಾನು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದೇನೆ, ನಮ್ಮ ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕೊಡಿಸಿದ್ದೇನೆ. ನಾವು ಮಾಡಿದ ನ್ಯಾಯಯುತ ಕಾಯಕ ನಮ್ಮನ್ನು ಕೈ ಬಿಡುವುದಿಲ್ಲ ಎಂಬುದು ನನ್ನ ನಂಬಿಕೆ. ಅದು ಈಗ ಸಾಬೀತಾಗಿದೆ.ಮಡಿವಾಳಪ್ಪ ಪಾಟೀಲ, ಬಸವರಾಜ್‌ ತಂದೆ