ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೧೨ ವರ್ಷಗಳ ಯಶಸ್ವಿ ಆಡಳಿತ ಪ್ರಯುಕ್ತ ಸೇವಾ ಸಂಕಲ್ಪದ ಅಂಗವಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಂದ ಜನಸಂಪರ್ಕ ಅಭಿಯಾನ, ಕಾರ್ಯಕರ್ತರ ಭೇಟಿ, ಹಿರಿಯ ಕಾರ್ಯಕರ್ತರ ಗೌರವಾರ್ಪಣೆ, ತಾಯಿಯ ಹೆಸರಲ್ಲಿ ಗಿಡ ನೆಡುವ ಕಾರ್ಯಕ್ರಮ ಗುರುವಾರ ಸವಣೂರು ಗ್ರಾಮದ ಕನಡಕುಮೇರು ದೇವಪ್ಪ ಗೌಡ ಎಂಬವರ ಮನೆಯಲ್ಲಿ ನಡೆಯಿತು.ಈ ಸಂದರ್ಭ ಮಾತನಾಡಿದ ಸಂಸದರು ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಸತಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಎಲೆಚುಕ್ಕಿ, ಹಳದಿ ರೋಗಗಳನ್ನು ಹತೋಟಿಯಲ್ಲಿಡಲು ಸ್ಯಾಂಪಲ್ ಸರ್ವೆಯನ್ನು ಸಿಪಿಸಿಆರ್‌ಐ ಜತೆಗೆ ಮಾಡಲಾಗಿದೆ. ವಿಜ್ಞಾನಿಗಳ ಸಂಶೋಧನೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಡಿ ಇಡಲಾಗಿದೆ. ಎಂದರು.ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ಆರಂಭವಾಗಿರುವ ಕಾಮಗಾರಿ ಮುಗಿಸಲು ಆದ್ಯತೆ ನೀಡಲಾಗಿದೆ. ನಿಲುಗಡೆಯಾಗಿದ್ದ ಸುಬ್ರಹ್ಮಣ್ಯ-ಮಂಗಳೂರು ರೈಲು ಓಡಾಟ ಪ್ರಾರಂಭಿಸಿ ಯಶಸ್ವಿಯಾಗಿ ಮುಂದರುವರಿಯುತ್ತಿದ್ದು, ೨೫ ರು.ಗೆ ಪ್ರಯಾಣ ಮಾಡುವಂತಾಗಿದೆ. ಮಂಗಳೂರು-ಬೆಂಗಳೂರು ರೈಲು ಹಳಿಯಲ್ಲಿ ವಿದ್ಯುತ್ ಲೈನ್ ೮ ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ವಂದೇ ಭಾರತ್ ರೈಲು ಓಡಾಟಕ್ಕೆ ಹಳಿ ಸಿದ್ದವಾಗಿದ್ದು, ಈ ಮಾರ್ಗದಲ್ಲಿ ಪ್ರಸ್ತುತ ಇರುವ ೧ ಹಳಿಯಲ್ಲಿ ಹೆಚ್ಚುವರಿ ರೈಲು ಓಡಿಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಈ ಮಾರ್ಗದಲ್ಲಿ ೨ ಟ್ರಾಕ್ ಹಳಿಗಳು ಆಗಬೇಕಾಗಿದೆ. ಇದಕ್ಕಾಗಿ ಜನಪ್ರತಿನಿಧಿಗಳ ಜತೆ ಸಾರ್ವಜನಿಕರೂ ಧ್ವನಿ ಎತ್ತಬೇಕು. ಮೂರು ತಿಂಗಳಿಗೊಮ್ಮೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಜನತೆಯ ಅಹವಾಲು ಸ್ವೀಕರಿಸಲಾಗುವುದು ಎಂದು ಹೇಳಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಸುಳ್ಯ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿಗಳಾದ ಗಣೇಶ ಉದನಡ್ಕ, ಶಿವಪ್ರಸಾದ್, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೇಂತಾರು, ಕಾರ್ಯದರ್ಶಿ ಜಯಪ್ರಕಾಶ್, ಜಿಲ್ಲಾ ಬಿಜೆಪಿ ಸದಸ್ಯ ದಿನೇಶ್ ಮೆದು, ಸುಳ್ಯ ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸವಣೂರು ಶಕ್ತಿ ಕೇಂದ್ರ ಪ್ರಮುಖ್ ಚೇತನ್ ಕುಮಾರ್ ಕೋಡಿಬೈಲು, ಪುಣ್ಚಪ್ಪಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ. ಸವಣೂರು, ಪಾಲ್ತಾಡಿ ಶಕ್ತಿ ಕೇಂದ್ರ ಪ್ರಮುಖ್ ಅನ್ನಪೂರ್ಣಪ್ರಸಾದ್ ರೈ ಬೈಲಾಡಿ ಮತ್ತಿತರರಿದ್ದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿದರು. ಸವಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು. ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ. ನಿರೂಪಿಸಿದರು.