ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣ ಈ ಮೂರು ಘಟನೆಗಳು ವೈಶಾಖ ಮಾಸದ ಹುಣ್ಣಿಮೆ ದಿನದಂದು ನಡೆದಿರುವುದರಿಂದ ಅಪಾರ ಮಹತ್ವವನ್ನು ಪಡೆದಿದೆ. ಬುದ್ಧನು ಭಾರತ ದೇಶದಲ್ಲಿ ಹುಟ್ಟಿದ್ದರೂ ಕೂಡ ಅವರ ಸಂದೇಶಗಳನ್ನು ಅನುಸರಿಸಿದ ಹಲವು ದೇಶಗಳು ಬುದ್ಧನ ಮೌಲ್ಯ ಹಾಗೂ ಸಂದೇಶಗಳನ್ನು ಅಳವಡಿಸಿಕೊಂಡು ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿವೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರಪಂಚಕ್ಕೆ ಜ್ಞಾನದ ಬೆಳಕು ನೀಡುವ ಜೊತೆಗೆ ಮಾನವೀಯ ಮೌಲ್ಯವನ್ನು ತಿಳಿಸಿಕೊಟ್ಟ ಬುದ್ಧನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ತಿಳಿಸಿದರು.

ತಾಲೂಕಿನ ಬಾಚನಹಳ್ಳಿಯ ಬುದ್ಧನ ಪ್ರತಿಮೆ ಆವರಣದಲ್ಲಿ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ, ನವೋದಯ ಸೇವಾ ಟ್ರಸ್ಟ್ ಡಿ.ಹಲಸಹಳ್ಳಿ ಸಂಯುಕ್ತಾಶ್ರಯದಲ್ಲಿ ನಡೆದ 2570ನೇ ಬುದ್ಧ ಪೂರ್ಣಿಮೆ, ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣ ಈ ಮೂರು ಘಟನೆಗಳು ವೈಶಾಖ ಮಾಸದ ಹುಣ್ಣಿಮೆ ದಿನದಂದು ನಡೆದಿರುವುದರಿಂದ ಅಪಾರ ಮಹತ್ವವನ್ನು ಪಡೆದಿದೆ. ಬುದ್ಧನು ಭಾರತ ದೇಶದಲ್ಲಿ ಹುಟ್ಟಿದ್ದರೂ ಕೂಡ ಅವರ ಸಂದೇಶಗಳನ್ನು ಅನುಸರಿಸಿದ ಹಲವು ದೇಶಗಳು ಬುದ್ಧನ ಮೌಲ್ಯ ಹಾಗೂ ಸಂದೇಶಗಳನ್ನು ಅಳವಡಿಸಿಕೊಂಡು ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿವೆ ಎಂದು ಹೇಳಿದರು.

ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳ್ಳದೇ ಮಾನವೀಯ ಮೌಲ್ಯಗಳು ಹಾಗೂ ಬುದ್ಧ ಅಂಬೇಡ್ಕರ್ ಅವರ ಸಂದೇಶಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಸಮಾಜ ಕಟ್ಟುವ ಜವಾಬ್ದಾರಿ ಹೆಚ್ಚಾಗಿರುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಸಾಹಿತಿ ಕೃಷ್ಣಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಾವಿರಾರು ಪುಸ್ತಕಗಳನ್ನು ಓದಿ ಅಪಾರ ಜ್ಞಾನ ಸಂಪಾದಿಸಿ ಸಮಾಜಕ್ಕೆ ತಿಳಿಸಬೇಕಾದ ವಿಷಯವನ್ನು ಪುಸ್ತಕದಲ್ಲಿ ಬರೆದಿರುವುದರಿಂದ ಪ್ರತಿಯೊಬ್ಬರೂ ಅವರ ಪುಸ್ತಕಗಳನ್ನು ಓದಬೇಕೆಂದು ಸಲಹೆ ನೀಡಿದರು.

ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ರಾಜ್ಯಾದ್ಯಂತ ಬುದ್ಧನ ಸಂದೇಶಗಳನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ಮೀಸಲು ಕ್ಷೇತ್ರ ಮಳವಳ್ಳಿಯಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ದರ್ಶನ್ ಬಿ. ಸೋಮಶೇಖರ್ ಸೇವೆ ಶ್ಲಾಘನೀಯ ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬುದ್ಧನ ಪ್ರತಿಮೆಗೆ ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಹಾಗೂ ಸಾರ್ವಜನಿಕರು ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್, ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ಜಿಲ್ಲಾಧ್ಯಕ್ಷ ಮಾರ್ಕಾಲು ನಟರಾಜು, ನಿವೃತ್ತ ಉಪನ್ಯಾಸಕ ರಂಗಸ್ವಾಮಿ, ಅಂಬೇಡ್ಕರ್ ವಾದಿ ಕಲ್ಕುಣಿ ಮಹದೇವು, ಮುಖಂಡರಾದ ಸೀಕ್ರೇಶ್, ಮಲ್ಲಿಕ್, ಮರಿಸ್ವಾಮಿ, ಸಂದೇಶ್ ಸೇರಿದಂತೆ ಇತರರು ಇದ್ದರು.

--------------

5ಕೆಎಂಎನ್ ಡಿ13

ಮಳವಳ್ಳಿ ತಾಲೂಕಿನ ಬಾಚನಹಳ್ಳಿಯ ಬುದ್ಧನ ಪ್ರತಿಮೆ ಆವರಣದಲ್ಲಿ ನಡೆದ 2570ನೇ ಬುದ್ಧ ಪೂರ್ಣಿಮೆ, ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಮಾತನಾಡಿದರು.