ಮಂಗಳೂರಿನ ಶ್ರೀ ಕ್ಷೇತ್ರ ಕೊರಗಜ್ಜನ ದೇವಸ್ಥಾನಕ್ಕೆ ಹೋಗಿ, ದರ್ಶನ ಮಾಡಿಕೊಂಡು ದಾವಣಗೆರೆಗೆ ಮರಳುತ್ತಿದ್ದಾಗ ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಕಾರು ಭದ್ರಾ ನಾಲೆಗೆ ಉರುಳಿ, ಇಬ್ಬರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇತರೆ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಚನ್ನಗಿರಿ ತಾಲೂಕು ಸೂಳೆಕೆರೆ ಸಮೀಪದ ಹೊಸೂರು ಬಳಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.

- ಕೊರಗಜ್ಜನ ದರ್ಶನಕ್ಕೆ ಮಂಗಳೂರಿಗೆ ತೆರಳಿದ್ದ ಸ್ನೇಹಿತರು

- - - - ದಾವಣಗೆರೆಯ ಸಿದ್ದೇಶ, ಮಲ್ಲಿಕಾರ್ಜುನ ಮೃತಪಟ್ಟವರು

- ಕಾರು ಚಾಲಕ ಮುನೀರ್‌, ಬಸವರಾಜ, ರಾಕೇಶ, ಸಂಜಯ್ ಪಾರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಂಗಳೂರಿನ ಶ್ರೀ ಕ್ಷೇತ್ರ ಕೊರಗಜ್ಜನ ದೇವಸ್ಥಾನಕ್ಕೆ ಹೋಗಿ, ದರ್ಶನ ಮಾಡಿಕೊಂಡು ದಾವಣಗೆರೆಗೆ ಮರಳುತ್ತಿದ್ದಾಗ ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಕಾರು ಭದ್ರಾ ನಾಲೆಗೆ ಉರುಳಿ, ಇಬ್ಬರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇತರೆ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಚನ್ನಗಿರಿ ತಾಲೂಕು ಸೂಳೆಕೆರೆ ಸಮೀಪದ ಹೊಸೂರು ಬಳಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.

ದಾವಣಗೆರೆ ವಾಸಿಗಳಾದ ಸಿದ್ದೇಶ (38), ಮಲ್ಲಿಕಾರ್ಜುನ (27) ಮೃತಪಟ್ಟವರು. ಕಾರು ಚಾಲಕ ಮುನೀರ್‌, ಬಸವರಾಜ, ರಾಕೇಶ ಹಾಗೂ ಸಂಜಯ್ ಕಾರಿನ ರೂಫ್‌ನಿಂದ ಹೊರಬಂದು ಪ್ರಾಣಗಳನ್ನು ಉಳಿಸಿಕೊಂಡವರು.

ಕೊರಗಜ್ಜನ ದರ್ಶನಕ್ಕೆಂದು ಸಿದ್ದೇಶ, ಮಲ್ಲಿಕಾರ್ಜುನ ಮತ್ತು ಸ್ನೇಹಿತರು ದಾವಣಗೆರೆಯಿಂದ ಕಾರಿನಲ್ಲಿ ತೆರಳಿದ್ದರು. ಶನಿವಾರ ಮಂಗಳೂರಿನಿಂದ ಹೊರಟ ಕಾರು ಭಾನುವಾರ ಬೆಳಗಿನ ಜಾವ ಚನ್ನಗಿರಿ ತಾಲೂಕು ಹೊಸೂರು ಬಳಿ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಪಕ್ಕದಲ್ಲೇ ಹರಿಯುತ್ತಿದ್ದ ಭದ್ರಾ ಕಾಲುವೆಗೆ ಬಿದ್ದಿದೆ. ನಿದ್ರೆ ಮಂಪರಿನಲ್ಲಿದ್ದವರಿಗೆ ಕತ್ತಲೆಯಲ್ಲಿ ದಿಢೀರ್ ಘಟನೆಯಿಂದ ಏನಾಗಿದೆಯೆಂಬುದೇ ಗೊತ್ತಾಗದಂತಾಗಿದೆ.

ನಾಲೆಗೆ ಕಾರು ಬಿದ್ದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು, ಕಾಲುವೆಗೆ ಬಿದ್ದಿದ್ದ ಕಾರು ಹಾಗೂ ಮೃತದೇಹಗಳ ಹುಡುಕಾಟ ನಡೆಸಿದರು. ಕ್ರೇನ್ ಸಹಾಯದಿಂದ ಕಾರಿನ ಸಮೇತ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-(ಫೋಟೋ ಕಳಿಸಲು ಪ್ರಯತ್ನಿಸುವೆ)