ರಾಣಿಬೆನ್ನೂರು: ಭಾರತವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿ ಸ್ಥಾಪಿಸಲು ಅಥವಾ ಘೋಷಿಸಲು ಜಯತು ಜಯತು ಹಿಂದೂ ರಾಷ್ಟ್ರಂ ಘೋಷಣೆಯನ್ನು ರಾಷ್ಟ್ರ ಘೋಷಣೆ ಅಂತ ಸಂಕಲ್ಪ ಮಾಡಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಗುರುಪ್ರಸಾದ ಗೌಡ ಹೇಳಿದರು.ನಗರದ ಪಂಪಾಪತಿ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಪ್ರತಿದಿನ ಸನಾತನ ಹಿಂದೂ ಧರ್ಮದ ಆಚರಣೆ ಬಗ್ಗೆ ಹಗುರವಾಗಿ ಮಾತನಾಡುವ, ಹಿಂದೂ ದೇವತೆಗಳ ವಿಡಂಬನೆ ಮಾಡುವ ಬುದ್ಧಿಜೀವಿಗಳ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ರಾಜ್ಯ ಸರ್ಕಾರ ಹಿಂದೂ ಸಂಘಟನೆಗಳ, ಹಿಂದೂ ಮುಖಂಡರ, ಸ್ವಾಮೀಜಿ, ಸಂತರ ವಾಕ್ ಸ್ವಾತಂತ್ರ‍್ಯವನ್ನು ಕಸಿದುಕೊಳ್ಳುವ ದ್ವೇಷ ಭಾಷಣ ಕಾಯಿದೆಯನ್ನು ನಾವು ವಿರೋಧಿಸಬೇಕಿದೆ ಎಂದರು.ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂಗಳು ಜಾತಿ-ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಿ. ಛತ್ರಪತಿ ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯದ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರದ ನಿರ್ಮಾಣ ಯಜ್ಞದಲ್ಲಿ ಕೈಜೋಡಿಸಿ ಎಂದರು.ವಕ್ತಾರ ಕೃಷ್ಣಾಸಾ ಪವಾರ ಮಾತನಾಡಿ, ಹಿಂದೂಗಳ ಸಂಘಟನೆಯ ಅವಶ್ಯಕತೆಯ ಬಗ್ಗೆ ಹೇಳಿ ಹಿಂದೂಗಳು ಈಗಲೂ ಸಂಘಟಿತರಾಗದಿದ್ದರೆ ಮಹಾರಾಷ್ಟ್ರದ ಮಾಲೆಗಾಂವ್ ಮುನ್ಸಿಪಲ್ ಅನ್ಯಮತೀಯತರ ಕೈ ಸೇರಿದಂತೆ ಭಾರತವು ಕೂಡ ಇದೆ ರೀತಿಯಲ್ಲಿ ಆಗಬಹುದು ಎಂದರು.ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮಾತನಾಡಿ, ಹಿಂದೂಸ್ಥಾನದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡಬೇಕಾಗಿದೆ. ಹಿಂದೂ ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧನಾಗಬೇಕು. ನಮ್ಮ ಶಿಕ್ಷಣ ವ್ಯವಸ್ಥೆ ನಮಗೆ ಸ್ವಾತಂತ್ರ‍್ಯ ಸಿಕ್ಕಿದೆ ಅಂತ ಕಲಿಸಿದೆ, ವಾಸ್ತವದಲ್ಲಿ ಸ್ವಾತಂತ್ರ‍್ಯವನ್ನು ಗಳಿಸಿದ್ದೇವೆ ಸುಮಾರು ಕ್ರಾಂತಿವೀರರ ಬಲಿದಾನ ಪಡೆದ ನಂತರ ಅಂತ ನಮಗೆ ಕಲಿಸಿ ಕೊಡಲಿಲ್ಲ. ಪ್ರತಿಯೊಂದು ಆಯಾಮದಲ್ಲಿ ಹಿಂದೂ ಸಮಾಜವನ್ನು ವಿರೋಧಿಸುವ ಮನಸ್ಥಿತಿಗಳ ವಿರುದ್ಧ ಸಂಘಟಿತರಾಗುವುದು ನಮ್ಮ ಧರ್ಮ ಕರ್ತವ್ಯವಾಗಿದೆ ಎಂದರು.ಸುಮಂಗಲಾ ಕುಂಬಾರ, ವಿಠೋಬಾ ಮಾಲ್ಸೆಕರ ಸೇರಿದಂತೆ ನೂರಾರು ಜನರು ಇದ್ದರು.