ಮುಂಡರಗಿ: ಇತ್ತೀಚಿನ ದಿನಮಾನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಆಹಾರದ ಪದ್ಧತಿ ಬದಲಾವಣೆ ಅವಶ್ಯವಾಗಿದೆ. ಎಲ್ಲರೂ ಗುಣಮಟ್ಟದ ಆಹಾರ ಸೇವನೆ ಮಾಡಬೇಕು. ಮಕ್ಕಳು ಅಭ್ಯಾಸದ ಜತೆಗೆ ದೈಹಿಕ ಶ್ರಮದ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಜ.ಅ. ಆಂಗ್ಲ ಮಾಧ್ಯಮ ಶಾಲೆಯ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಡಾ. ಅನ್ನದಾನಿ ಮೇಟಿ ತಿಳಿಸಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಜರುಗಿದ 2025- 26ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಹೊಂದಲು ಹೆಚ್ಚೆಚ್ಟು ಕ್ರೀಡೆಯಲ್ಲಿ ತೊಡಗಬೇಕು. ಇತ್ತೀಚೆಗೆ ದೈಹಿಕ ಶ್ರಮ ದೈನಂದಿನ ಜೀವನದಲ್ಲಿ ಕಡಿಮೆಯಾಗುತ್ತಿದೆ. ಕ್ರೀಡೆ, ವ್ಯಾಯಾಮ, ಯೋಗ, ನೃತ್ಯ ಇನ್ನಿತರ ಕಾಯಕದಲ್ಲಿ ಭಾಗವಹಿಸಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಶಾಲೆಯ ಮೇಲ್ವಿಚಾರಣಾ ಸಮಿತಿ ಉಪಾಧ್ಯಕ್ಷ ಬಸವರಾಜ ಬಿಸನಹಳ್ಳಿ ಮಾತನಾಡಿ, ಮನುಷ್ಯ ಆರೋಗ್ಯಯುತವಾಗಿರಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯವಿದೆ. ಪಾಲಕರು ಕ್ರೀಡೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಪಾಲಕರು ಮಕ್ಕಳ ಆಸಕ್ತಿಗೆ ಪೂರಕವಾಗುವ ವಾತಾವರಣ ನಿರ್ಮಿಸಿ ಕೊಡಬೇಕು ಎಂದರು.ವೈದ್ಯ ಡಾ. ಐ.ಎಸ್. ಸರ್ವಿ ಮಾತನಾಡಿ, ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಪತ್ರಕರ್ತ ಸಂತೋಷ ಮುರಡಿ ಮಾತನಾಡಿದರು. ಸಾಕ್ಷಿ ನವಲಿ, ಪಾಲಕರು, ಮಕ್ಕಳು, ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ರಾಜಶೇಖರ ಕಡಿವಾಲರ ಸ್ವಾಗತಿಸಿದರು. ಶಿಕ್ಷಕಿ ಲೀಲಾ ಉಮಚಗಿ ನಿರೂಪಿಸಿದರು. ಶಿಕ್ಷಕಿ ಎ.ಕೆ. ಮಕಾಂದಾರ ವಂದಿಸಿದರು.