ಕನ್ನಡಪ್ರಭ ವಾರ್ತೆ ಹಳಿಯಾಳ
ಹನ್ನೆರಡು ವರ್ಷಗಳ ನಂತರ ಆರಂಭಗೊಂಡಿರುವ ತಾಲೂಕಿನ ಮುರ್ಕವಾಡ ಗ್ರಾಮದ ಶ್ರೀ ಗ್ರಾಮದೇವಿ ಲಕ್ಷ್ಮೀದೇವಿಯ ನಾಲ್ಕು ದಿನಗಳ ವೈಭವದ ಹೊನ್ನಾಟವು ಮಂಗಳವಾರ ಶಾಂತಿಯುತವಾಗಿ ಸಂಪನ್ನಗೊಂಡಿತು.ತಾಲೂಕಿನೆಲ್ಲೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಹಾಗೂ ಮುರ್ಕವಾಡ ಗ್ರಾಮಸ್ಥರೊಂದಿಗೆ ಜೊತೆಗೂಡಿ ಗ್ರಾಮದೇವಿಯ ಪಲ್ಲಕ್ಕಿಯನ್ನು ಹೊತ್ತುಕೊಂಡು ಗ್ರಾಮದಲ್ಲಿ ಸಂಚರಿಸಿದರು. ಈ ಸಂದರ್ಭ ಮುಗಿಲು ಮುಟ್ಟುವ ಉಘೇ-ಉಘೇ ಎಂಬ ಘೋಷಣೆಗಳೊಂದಿಗೆ ಶ್ರೀ ಗ್ರಾಮದೇವಿಯ ಜೈಕಾರ ಹಾಕಿದರು. ಹೊನ್ನಾಟದ ಮೆರವಣಿಗೆಗೆ ಬಂಡಾರವನ್ನು ತೂರಿ ಭಕ್ತರು ಸಂಭ್ರಮಿಸಿದರೇ, ಇನ್ನೂ ಕೆಲವರು ಭಂಡಾರದೋಕುಳಿಯಲ್ಲಿ ಮಿಂದೆದ್ದರು. ಗ್ರಾಮದೇವಿಯ ಜಾತ್ರೆ ಹಾಗೂ ಹೊನ್ನಾಟದಿಂದಾಗಿ ಇಡೀ ಮುರ್ಕವಾಡ ಗ್ರಾಮ ಅರಿಶಿಣದಿಂದ ಅಲಂಕರಿಸಿಕೊಂಡು ಕಂಗೊಳಿಸಿತು. ದಶಕಗಳ ನಂತರ ನಡೆಯುತ್ತಿರುವ ಹೊನ್ನಾಟವನ್ನು ಕಣ್ತುಂಬಿಸಿಕೊಳ್ಳಲು ತಾಲೂಕು ಸೇರಿದಂತೆ ನೆರೆಯ ತಾಲೂಕ, ಜಿಲ್ಲೆಯೆಲ್ಲೆಡೆಯಿಂದ ಭಕ್ತಾದಿಗಳು ಆಗಮಿಸಿದರಿಂದ ಮುರ್ಕವಾಡ ಗ್ರಾಮವು ಭಾರಿ ಸಂಖ್ಯೆಯಲ್ಲಿ ಜನರಿಂದ ತುಂಬಿ ತುಳುಕಿದೆ.
ರಥೋತ್ಸವ:ಗ್ರಾಮದೇವಿಯ ರಥೋತ್ಸವವು ಫೆ. 11ರಂದು ನಡೆಯಲಿದೆ. ಮಧ್ಯಾಹ್ನ 12.22ಕ್ಕೆ ರಥೋತ್ಸವ ಆರಂಭಗೊಳ್ಳಲಿದ್ದು, ಮರಾಠ ಜಗದ್ಗುರುಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಥೋತ್ಸವಕ್ಕಾಗಿ ಅಂದಾಜು 65 ಅಡಿಗಳ ಭವ್ಯ ಎತ್ತರದ ರಥವನ್ನು ಸಿದ್ಧಪಡಿಸಲಾಗುತ್ತಿದ್ದು, ರಥಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯವು ಭರದಿಂದ ಸಾಗಿದೆ.ಲಕ್ಷ್ಮೀದೇವಿಯ ಜಾತ್ರೆ: ಮದ್ಯ ಮಾರಾಟ ನಿಷೇಧ
ಹಳಿಯಾಳ ತಾಲೂಕಿನ ಮುರ್ಕವಾಡದಲ್ಲಿ ಶ್ರೀ ಲಕ್ಷ್ಮಿದೇವಿಯ ಮಹಾರಥೋತ್ಸವ ಫೆ.11 ರಂದು ಹಾಗೂ ಫೆ. 12ರಂದು ಮಹಾಪೂಜೆ ನಡೆಯಲಿರುವ ಹಿನ್ನೆಲೆ ಮದ್ಯ ಮಾರಾಟ ನಿಷೇಧಿಸಲಾಗಿದೆ.ಜಾತ್ರಾ ಮಹೋತ್ಸವದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸುವ ಸಲುವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೆ.11ರ ಬೆಳಗ್ಗೆ 6 ಗಂಟೆಯಿಂದ ಫೆ.13 ರ ಬೆಳಗ್ಗೆ 6 ಗಂಟೆಯವರೆಗೆ ಹಳಿಯಾಳ ತಾಲೂಕಿನಾದ್ಯಂತ ಇರುವ, ಎಲ್ಲಾ ರೀತಿಯ ಮದ್ಯ ಸಾಗಾಟ ಹಾಗೂ ಮಾರಾಟದ ಅಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.