ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಶ್ರೀಗಳಿಂದ ವಿಧ್ಯುಕ್ತವಾಗಿ ಚಾಲನೆ

| Published : Mar 19 2024, 12:47 AM IST

ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಶ್ರೀಗಳಿಂದ ವಿಧ್ಯುಕ್ತವಾಗಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಧರ್ಮದಲ್ಲಿ ಧರ್ಮ ಎಂಬುದು ಅತಿ ಪಾವಿತ್ರ್ಯವನ್ನು ಹೊಂದಿದೆ. ಈ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಧರ್ಮ ಅಚ್ಚಳಿಯದೆ ಉಳಿದು ಧರ್ಮದ ನೆಲೆಗಟ್ಟಿನಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂಬ ಪ್ರತೀಕಕ್ಕೆ ಪೂರಕವಾಗಿ ಧರ್ಮಧ್ವಜ ಸ್ಥಾಪನೆ ಹಾಗೂ ನಾಂದಿ ಪೂಜೆ ಮಾಡುವ ಮೂಲಕ ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ.

ಕನ್ನಡಪ್ರಭವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಹೋಮ, ಅಭಿಷೇಕ ಮತ್ತು ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಧರ್ಮಧ್ವಜ ಸ್ಥಾಪನೆ ಮತ್ತು ನಾಂದಿ ಪೂಜೆ ಮಾಡುವ ಮೂಲಕ ೯ ದಿನಗಳ ಕಾಲ ನಡೆಯುವ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ಬೆಳಗ್ಗೆ ವಿದ್ಯುಕ್ತ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಿಂದೂ ಧರ್ಮದಲ್ಲಿ ಧರ್ಮ ಎಂಬುದು ಅತಿ ಪಾವಿತ್ರ್ಯವನ್ನು ಹೊಂದಿದೆ. ಈ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಧರ್ಮ ಅಚ್ಚಳಿಯದೆ ಉಳಿದು ಧರ್ಮದ ನೆಲೆಗಟ್ಟಿನಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂಬ ಪ್ರತೀಕಕ್ಕೆ ಪೂರಕವಾಗಿ ಧರ್ಮಧ್ವಜ ಸ್ಥಾಪನೆ ಹಾಗೂ ನಾಂದಿ ಪೂಜೆ ಮಾಡುವ ಮೂಲಕ ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ.ಶೇಖರ್, ದೇವಾಲಯ ಸಂವರ್ಧನ ಸಮಿತಿಯ ಸಂಯೋಜಕ ಮನೋಹರ್‌ ಮಠದ್ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.

ಮ್ಯಾರಥಾನ್ ಓಟ-ದೇಶಿ ಕ್ರೀಡೆ:

ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.೧೯ರಂದು ಬೆಳಗ್ಗೆ ೭.೩೦ಕ್ಕೆ ಮ್ಯಾರಥಾನ್ ಓಟಕ್ಕೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡುವರು. ನಂತರ ದೇಶಿಯ ಕ್ರೀಡೆಗಳಾದ ಪುರುಷರ ಮುಕ್ತ ಲಗೋರಿ ಪಂದ್ಯಾವಳಿ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಸಂಜೆ ೬ ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರಸ್ವಾಮಿ ಉತ್ಸವ ನಡೆಯಲಿದೆ.

ಲಗೋರಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ೧೫ ಸಾವಿರ ರು., ದ್ವಿತೀಯ ೧೦ ಸಾವಿರ ರು., ತೃತೀಯ ೭ ಸಾವಿರ ರು. ಹಾಗೂ ಚತುರ್ಥ ೪ ಸಾವಿರ ರು. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.