ಕನ್ನಡಪ್ರಭ ವಾರ್ತೆ ಮೂಡಲಗಿ
ರೈತನೇ ದೇವರು, ರೈತನ ಜೀವನದ ಆರ್ಥಿಕ ವ್ಯವಸ್ಥೆ ಸುಧಾರಿಸುವಲ್ಲಿ ಕೃಷಿ ಪರಿಕರಗಳು ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸರಿಯಾದ ಪ್ರಮಾಣ ಹಾಗೂ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುವುದರಿಂದ ಸುಸ್ಥಿರ ಕೃಷಿಗೆ ನಾಂದಿಯಾಗಲಿದೆ ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ.ಎಸ್.ಎನ್.ಜಾಧವ ಹೇಳಿದರು.ತಾಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾದ ೪ನೇ ತಂಡದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಾಪಾರದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನ ಮುಟ್ಟಿಸುವುದು ತರಬೇತಿ ಪಡೆದ ಪರಿಕರ ಮಾರಾಟಗಾರರ ಜವಾಬ್ದಾರಿ ಎಂದರು.ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್ ಮಾತನಾಡಿ, ಪರಿಕರ ಮಾರಾಟಗಾರರು ರೈತರ ವೈದ್ಯಾಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ರೈತರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸುವುದು ವೈದ್ಯಾಧಿಕಾರಿಗಳು ರೋಗಿಯೊಂದಿಗೆ ಸಮಾಲೋಚಿಸಿದ ಹಾಗೆ ಇರಬೇಕು ಎಂದು ತಿಳಿಸಿದರು.
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಉಪ-ನಿರ್ದೇಶಕಿ ಗೀತಾ ಲೋಳಸೂರಮಠ ಮಾತನಾಡಿ, ರೈತರು ಗೊಬ್ಬರಗಳನ್ನು ಮಿತವಾಗಿ ಬಳಸಬೇಕು. ಅತಿಯಾದ ಗೊಬ್ಬರಗಳ ಬಳಕೆಯಿಂದ ರೋಗರುಜಿನಗಳು ಹೆಚ್ಚುತ್ತಿವೆ ಎಂದು ಹೇಳಿದರು.ಮಹಾವಿದ್ಯಾಲಯದ ಡೀನ್ ಡಾ.ಆನಂದ ಮಾಸ್ತಿಹೊಳಿ, ಡಾ.ದಿಲೀಪಕುಮಾರ ಮಸೂತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಹಣಮಂತರಾವ್ ಜೋಗನ್ ಸ್ವಾಗತಿಸಿದರು. ಪ್ರಭಾವತಿ ಅಂಗಡಿ ನಿರೂಪಿಸಿ, ವಂದಿಸಿದರು.