ಕನ್ನಡಪ್ರಭ ವಾರ್ತೆ ಬೆಳಗಾವಿ

ಶ್ರೀರಾಮ್ ಕಾಲೋನಿ, ಸಾಯಿ ನಗರ, ಗೋಕುಲ್ ನಗರ ಮತ್ತು ವಿನಾಯಕ ನಗರ ವ್ಯಾಪ್ತಿಯ ಕಳೆದ 20 ವರ್ಷಗಳಿಂದ ಅಪೂರ್ಣವಾಗಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ಗ್ರಾಪಂ ಸದಸ್ಯ ರವಿ ಕೋಟಬಾಗಿ ನೇತೃತ್ವದಲ್ಲಿ ನಿವಾಸಿಗಳು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಮ್ಮ ವ್ಯಾಪ್ತಿಯ ನಾಲ್ಕು ಕಾಲೋನಿಗಳಲ್ಲಿ ಕಳೆದ ಎರಡು ದಶಕಗಳಿಂದ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಗಳು ಸಂಪೂರ್ಣ ಹದಗೆಟ್ಟು ದೊಡ್ಡ ಹೊಂಡಗಳಾಗಿವೆ. ವೃದ್ಧರು, ಮಕ್ಕಳು, ಆ್ಯಂಬುಲೆನ್ಸ್ ಓಡಾಡಲೂ ಪರದಾಡುವಂತಾಗಿದೆ. ಅಸಮರ್ಪಕ ಚರಂಡಿ ವ್ಯವಸ್ಥೆ. ವೈಜ್ಞಾನಿಕ ಒಳಚರಂಡಿ ಇಲ್ಲ. ಮಳೆಗಾಲದಲ್ಲಿ ಕೊಳಚೆ ನೀರು ಮನೆ ಮುಂದೆ ಹರಿದು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ನಿಯಮಿತವಾಗಿ ಕಸ ಸಂಗ್ರಹಣೆ ಆಗುತ್ತಿಲ್ಲ. ರಸ್ತೆ ಬದಿಯಲ್ಲೇ ಕಸದ ರಾಶಿ, ದುರ್ವಾಸನೆಯಿಂದ ಆರೋಗ್ಯ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

20 ವರ್ಷದಿಂದ ತೆರಿಗೆ ಕಟ್ಟುತ್ತಿದ್ದರೂ ಸೂಕ್ತ ಸೌಕರ್ಯ ಸಿಗುತ್ತಿಲ್ಲ. ಗ್ರಾಪಂ ಮಟ್ಟದಲ್ಲಿ ಚರ್ಚಿಸಿದರೂ ಅನುದಾನದ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿನಂತಿಸಿಕೊಳ್ಳುವುದೇನೆಂದರೆ, ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡಿ ರಸ್ತೆ-ಚರಂಡಿ ಪೂರ್ಣಗೊಳಿಸಬೇಕು ಹಾಗೂ ಪ್ರತಿದಿನ ಕಸ ವಿಲೇವಾರಿಗೆ ಪಿಡಿಒ ಹಾಗೂ ತಾಪಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಆಗ್ರಹಿಸಿದರು.ಈ ವೇಳೆ ವಿನೋದ ಕರ್ಲಾ, ರಮೇಶ ದೇಶಪಾಂಡೆ, ಪ್ರಕಾಶ ಹರದಿ, ಕುಂಬಾರ ಗೌಡರ ಸೇರಿದಂತೆ ಇತರರು ಇದ್ದರು.