ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜನಚೈತನ್ಯ ಫೌಂಡೇಷನ್ ವತಿಯಿಂದ ನಗರದ ಜೆಎಲ್ ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ 110 ವಿದ್ಯಾರ್ಥಿಗಳಿಗೆ ಚೈತನ್ಯ ಪ್ರತಿಭಾ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಇಂದಿನ ವಿದ್ಯಾರ್ಥಿಗಳ ಬುದ್ಧಿಮತ್ತೆ ಅತ್ಯುತ್ತಮವಾಗಿದೆ. ಎಲ್ಲರೂ ಕೂಡ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ. ಚೆನ್ನಾಗಿ ಓದಿದವರು ದೇಶ- ವಿದೇಶಗಳಲ್ಲಿ ತಮಗೆ ಬೇಕಾದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿವೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಮೊಬೈಲ್, ಟಿವಿಗಳನ್ನು ಎಷ್ಟು ಬೇಕೋ ಅಷ್ಟು ಬಳಸಬೇಕು. ಸಾಮಾಜಿಕ ಜಾಲತಾಣಗಳಿಂದಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿಗೆ ಸಾವಿಗೀಡಾಗಿರುವುದಕ್ಕೆ ಕ್ರಿಕ್ರೆಟಿಗರ ಮೇಲಿನ ಅಂಧಾಬಿಮಾನವೇ ಕಾರಣ. ಅಭಿಮಾನ ಇರಲಿ. ಆದರೆ ಈ ರೀತಿಯ ಅಂಧಾಭಿಮಾನ ಬೇಡ ಎಂದರು.ಇಂದು ವಿಶ್ವ ಪರಿಸರ ದಿನವಾಗಿದ್ದು, ಪ್ರತಿಯೊಬ್ಬರೂ ನಮ್ಮ ಪರಿಸವನ್ನು ಕಾಪಾಡುವ ಪ್ರಯತ್ನ ಮಾಡಬೇಕ ಎಂದು ಅವರು ಸಲಹೆ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ವಾಯುಪುತ್ರ ಡೆವಲಪರ್ಸ್ ಮಾಲೀಕ ಚೆಲುವರಾಜು ಮಾತನಾಡಿ, ಚೆನ್ನಾಗಿ ಓದಿ. ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಆದರೆ ಯುವಕರು ಅಂಧಾಭಿಮಾನಕ್ಕೆ ಬಲಿಯಾಗಬಾರದು ಎಂದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ನೋಡಿದಾಗ ನಾವು ಎಲ್ಲಿದ್ದೇವೆ. ಮನುಷ್ಯ ಮನುಷ್ಯನನ್ನೇ ತುಳಿದು ಸಾಯಿಸುವ ಪರಿಸ್ಥಿತಿ ಮುಂದೆಂದೂ ಬರಬಾರದು ಎಂದರು.
ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಬೇಕು. ಭೂಮಿ ತಾಯಿ ನಮಗಾಗಿ ಎಲ್ಲವನ್ನು ಕೊಟ್ಟಿದ್ದಾಳೆ. ಅದನ್ನು ಉಳಿಸುವ ಬದಲು ಹಾಳು ಮಾಡಬಾರದು. ಆ ರೀತಿಯ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಕೆಐಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಡಾ.ಎನ್.ಸಿ. ವೆಂಕಟರಾಜು, ಶಿಕ್ಷಣ ತಜ್ಞೆ ಡಾ.ಎಲ್. ಸವಿತಾ, ವೈದ್ಯರಾದ ಡಾ.ಎ.ಎನ್. ಪದ್ಮಾ, ಡಾ. ರೇಖಾ ಅರುಣ್ ಮುಖ್ಯ ಅತಿಥಿಯಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಫೌಂಡೇಷನ್ ಅಧ್ಯಕ್ಷ ಆರ್. ಲಕ್ಷ್ಮಣ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಗಾಯಕರಾದ ಆರ್. ಲಕ್ಷ್ಮಣ್, ಎಸ್. ಅಮರ್, ಜಾಯ್ಸ್ ವೈಶಾಖ್, ನಾಗೇಂದ್ರ,, ಅಶ್ವಿತ್ ಅತ್ರಿ, ಡಾ.ಪ್ರಕಾಶ್, ಡಾ.ಎ.ಎನ್. ಪದ್ಮಾ, ಬಿ.ಎಸ್. ವಿಜಯ ಆನಂದ್ ಮೊದಲಾದವರು ಗಾಯನ ಪ್ರಸ್ತುತಪಡಿಸಿದರು