ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಈಗಾಗಲೇ ನಮ್ಮ ತಾಲೂಕಿನಲ್ಲಿ ಬಾಲ ಗರ್ಭಿಣಿಯರಾಗುತ್ತಿರುವುದು ಕಂಡುಬಂದಿದ್ದು, ಈಗಾಗಲೇ 35 ಬಾಲ ಗರ್ಭಿಣಿಯರು ದಾಖಲಾಗಿರುವುದು ಆತಂಕಕಾರಿ ವಿಷಯ ಎಂದು ಶಾಸಕ ಸುರೇಶಬಾಬು ಅಸಮಾಧಾನ ವ್ಯಕ್ತಪಡಿಸಿದರು.ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಎಷ್ಟೋ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗೆ ಉಳಿಸಿದ್ದಾರೆ. ಅದರಲ್ಲೂ ಕೆಲವು ಹೆಣ್ಣುಮಕ್ಕಳಿಗೆ ಬಾಲ್ಯವಿವಾಹವಾಗುತ್ತಿದೆ. ಇನ್ನೂ ಕೆಲವರು ಹಲವು ಕಾರಣಗಳಿಂದಾಗಿ ಬಾಲಕಿಯರಿದ್ದಾಗಲೇ ಗರ್ಭಿಣಿಯಾಗುತ್ತಿದ್ದಾರೆ. ಇದು ನಿಜಕ್ಕೂ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಕಾರ ಈಗಾಗಲೇ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದೆ. ಆರೋಗ್ಯ, ಶಿಕ್ಷಣ,, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳು ಅತ್ಯಂತ ಜವಾಬ್ದಾರಿಯುತ ಇಲಾಖೆಗಳು ಎನಿಸಿಕೊಂಡಿದ್ದು ಒಂದೊಕ್ಕೊಂದು ಸೇರಿ ಈ ರೀತಿ ಘಟನೆಗಳು ನಡೆಯುವುದನ್ನು ತಡೆಯಬೇಕಿದೆ ಎಂದು ಸೂಚಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ನೈಜತೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಚಿಕಿತ್ಸೆ ನೀಡಿ ಬಾಣಂತಿ, ಸಾವು ಶಿಶುಮರಣ ತಪ್ಪಿಸಿ. ಈ ವರ್ಷ 17 ಶಿಶುಗಳು ಸಾವನ್ನಪ್ಪಿರುವುದು ದುರಾದೃಷ್ಟಕರ ಇದಕ್ಕೆ ಕಾರಣವೇನು? ನಿಮ್ಮ ಬೇಜವಾಬ್ದಾರಿತನವಲ್ಲವೇ? ಅಂಗನವಾಡಿ ಕಾರ್ಯಕರ್ತೆಯರು, ದಾದಿಯರು ಒಂದುಗೂಡಿ ಮನೆ ಮನೆಗೆ ತೆರಳಿ ಬಾಣಂತಿಯರಿಗೆ ರೋಗದ ಜನಗಳ ಬಗ್ಗೆ ಸಲಹೆ ನೀಡಿ ಮರಣ ಪ್ರಮಾಣ ತಪ್ಪಿಸಬಹುದು. ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಶಿಶುಮರಣ ತಪ್ಪಿಸಲು ಬಾಣಂತಿಯರಿಗೆ ಸಲಹೆ ಸೂಚನೆಯನ್ನು ನೀಡಬೇಕು ಅವರಲ್ಲಿ ಧೈರ್ಯ ತುಂಬುವಂತೆ ಕೆಲಸ ಮಾಡಿ ಎಂದರು.ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಜಾನುವಾರುಗಳಿಗೆ ಮೇಕೆ ಕುರಿ ಗಳಿಗೆ ಕಾಲುಬಾಯಿ ಲಸಿಕೆಗಳನ್ನ ಸಮಯಕ್ಕೆ ಸರಿಯಾಗಿ ಹಾಕಿ. ಹೇಮಾವತಿ ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಬೇಗ ತೆಗೆಸಿ ನೀರು ಬಿಡಲು ಅನುವು ಮಾಡಿಕೊಡಬೇಕೆಂದು ಹೇಳಿದರು.
ಆಹಾರ ಮತ್ತು ಪೌಷ್ಠಿಕ ಭದ್ರತೆ ಸಿರಿಧಾನ್ಯ ಯೋಜನೆಯಡಿ ಸಂಸ್ಕರಣೆ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಪ್ರೋತ್ಸಾಹ ನೀಡಲು 55 ಲಕ್ಷದ ಸಹಾಯ ಧನದಲ್ಲಿ ಸಿರಿಧಾನ್ಯ ಮಿಲ್ಲೇಟ್ ಸ್ಥಾಪಿಸಲು ಬನಶಂಕರಿ ರೈತ ಉತ್ಪಾದಕ ಕಂಪನಿಗೆ ನೀಡಲಾಗಿದೆ. ಈ ಯೋಜನೆಯಡಿ ರೈತರಿಗೆ 1584 ಪಲಾನುಭವಿಗಳಿಗೆ 8931606 ಲಕ್ಷಗಳ ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗಿದೆ ಎಂದು ಸಭೆಗೆ ಕೃಷಿ ಅಧಿಕಾರಿ ಶಿವರಾಜು ತಿಳಿಸಿದರು.ಈ ಸಭೆಯಲ್ಲಿ ತಹಸೀಲ್ದಾರ್ ಪುರಂದರ್, ಗ್ಯಾರಂಟಿಗಳ ಅಧ್ಯಕ್ಷರಾದ ಸಿಡಿ ಚಂದ್ರಶೇಖರ್ ಇಒ ದೊಡ್ಡ ಸಿದ್ದಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಲ್ಲಿ ರಾಜಕುಮಾರ್ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್ ಜಿಲ್ಲಾ ಕೃಷಿ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಮಲಗೊಂಡನಹಳ್ಳಿ ಗಂಗಾಧರಯ್ಯ ಇತರ ಎಲ್ಲಾ ಅಧಿಕಾರಿಗಳು ಆಚರಿದ್ದರು.