ದೇಶದ ರಕ್ಷಣೆ ಪ್ರತಿ ನಾಗರಿಕನ ಕರ್ತವ್ಯ : ಕರ್ನಲ್ ಜಯಚಂದ್ರನ್‌

| N/A | Published : May 09 2025, 12:57 AM IST / Updated: May 09 2025, 03:46 AM IST

ಸಾರಾಂಶ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕ ವತಿಯಿಂದ ಯುವ ರೆಡ್‌ಕ್ರಾಸ್ ಉಪಸಮಿತಿ, ಯುವ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಘಟಕ ಮತ್ತು ಪಾದುವ ಪದವಿ ಕಾಲೇಜು ಸಹಯೋಗದಲ್ಲಿ ನಾಗರಿಕ ಸುರಕ್ಷಾ ಅಣಕು ಪ್ರದರ್ಶನ ಬುಧವಾರ ನಗರದ ಪಾದುವಾ ಕಾಲೇಜಿನ ಮೈದಾನದಲ್ಲಿ ನಡೆಯಿತು.

 ಮಂಗಳೂರು  : ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕ ವತಿಯಿಂದ ಯುವ ರೆಡ್‌ಕ್ರಾಸ್ ಉಪಸಮಿತಿ, ಯುವ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಘಟಕ ಮತ್ತು ಪಾದುವ ಪದವಿ ಕಾಲೇಜು ಸಹಯೋಗದಲ್ಲಿ ನಾಗರಿಕ ಸುರಕ್ಷಾ ಅಣಕು ಪ್ರದರ್ಶನ ಬುಧವಾರ ನಗರದ ಪಾದುವಾ ಕಾಲೇಜಿನ ಮೈದಾನದಲ್ಲಿ ನಡೆಯಿತು.

ಮುಖ್ಯ ಅತಿಥಿ, ನಿವೃತ್ತ ಸೇನಾಧಿಕಾರಿ ಕರ್ನಲ್ ಕೆ. ಜಯಚಂದ್ರನ್ ಮಾತನಾಡಿ, ಭಾರತ ಇಂದು ದೇಶದ ಹೊರಗೆ ಮತ್ತು ಒಳಗೆ ಸವಾಲುಗಳನ್ನು ಎದುರಿಸುತ್ತಿದೆ. ದೇಶದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶದ ನಾಗರಿಕರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಸಲುವಾಗಿ ದೇಶಾದ್ಯಂತ ಪೂರ್ವ ಸಿದ್ಧತಾ ತಾಲೀಮು ನಡೆಸಲಾಗುತ್ತಿದೆ. ಭಾರತೀಯ ಸೇನೆ ಈಗ ಸಶಕ್ತವಾಗಿದ್ದು, ಆಪರೇಶನ್ ಸಿಂಧೂರ ಮೂಲಕ ಪಾಕಿಸ್ತಾನದ ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸಂಭಾವ್ಯ ಅನಾಹುತಗಳನ್ನು ತಡೆಯಲು ನಾಗರಿಕರು ಕೂಡ ಸಜ್ಜಾಗಬೇಕು ಎಂದರು.ಪಾದುವಾ ಕಾಲೇಜಿನ ಪ್ರಾಂಶುಪಾಲ ಫಾ.ಅರುಣ್ ವಿಲ್ಸನ್ ಲೋಬೊ, ಅಗ್ನಿಶಾಮಕ ದಳದ ಕದ್ರಿ ಠಾಣೆಯ ಅಧಿಕಾರಿ ವೆಂಕಟೇಶ್, ಯುವ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಘಟಕದ ನೋಡಲ್ ಆಫೀಸರ್ ಡಾ.ಗಾಯತ್ರಿ ಎನ್. ಮುಖ್ಯ ಅತಿಥಿಗಳಾಗಿದ್ದರು. ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕದ ಖಜಾಂಚಿ ಮೋಹನ್ ಶೆಟ್ಟಿ, ನಿರ್ದೇಶಕರಾದ ಪಿ.ಬಿ.ಹರೀಶ್ ರೈ, ಗುರುದತ್ ಕಾಮತ್, ಸಲಹೆಗಾರ ಸುಧಾಕರ್ ಇದ್ದರು. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗ್ನಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.