ಸಾರಾಂಶ
ಕುಂದಗೋಳ ತಾಲೂಕಿನ ಕೆಲವು ಭಾಗಗಳಿಗೆ ಮನವಿ ನೀಡಿದರೂ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಮೇ 15ರ ಒಳಗೆ ಬೇಡಿಕೆಗೆ ಸ್ಪಂದಿಸದಿದ್ದರೆ ರಸ್ತೆ ತಡೆ ನಡೆಸಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಎಚ್ಚರಿಕೆ ನೀಡಿದ್ದಾರೆ.
ಕುಂದಗೋಳ: ತಾಲೂಕಿನ ಕೆಲ ಭಾಗಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಸಾರಿಗೆ ಇಲಾಖೆಯ ಡಿಸಿಗೆ ಲಿಖಿತ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ. ಮೇ 15ರ ಒಳಗೆ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸುವುದಾಗಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಎಚ್ಚರಿಸಿದ್ದಾರೆ.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಯರಗುಪ್ಪಿಯಿಂದ ಹುಬ್ಬಳ್ಳಿ, ಕುಂದಗೋಳದಿಂದ ಶಿಗ್ಗಾಂವಿ, ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರ, ಕುಂದಗೋಳದಿಂದ ತಡಸ ಹೀಗೆ ಒಟ್ಟು 9 ರೂಟ್ನ ಬಸ್ಗಾಗಿ ಮನವಿ ಕೊಡಲಾಗಿದೆ. ಇದಕ್ಕೆ ಯಾವುದೇ ರೀತಿ ಸ್ಪಂದಿಸಿಲ್ಲ. ಸಭೆಗೂ ಸಾರಿಗೆ ಇಲಾಖೆಯ ವ್ಯವಸ್ಥಾಪಕರು ಬರದೇ ಸಿಬ್ಬಂದಿ ಕಳುಹಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ 357 ಫಲಾನುಭವಿಗಳಿಗೆ ಹಣ ಜಮೆ ಆಗಿಲ್ಲ. ಇದರಲ್ಲಿ ಐಟಿ, ಜಿಎಸ್ಟಿ ಹೊಂದಿರುವ ಕೆಲವು ಫಲಾನುಭವಿಗಳಿದ್ದು, ಮೇಲಧಿಕಾರಿಗಳ ಜತೆ ಚರ್ಚಿಸಿ ಸರಿಪಡಿಸುವುದಾಗಿ ಹೇಳಿದರು.
ಗ್ಯಾರಂಟಿ ಸಮಿತಿ ಸದಸ್ಯ ಅಡಿವೆಪ್ಪ ಹೆಬಸೂರ ಮಾತನಾಡಿದರು. ಹೆಸ್ಕಾಂ ಅಧಿಕಾರಿ ಹಾಗೂ ಯುವ ನಿಧಿ ಯೋಜನೆ ಸಂಬಂಧಿಸಿದಂತೆ ಅಧಿಕಾರಿಗಳು ಮಾತನಾಡಿದರು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಶಶಿಧರ ಸೋಮರೆಡ್ಡಿ, ಅಡಿವಪ್ಪ ಹೆಬಸೂರ, ಚಂದ್ರು ಕಾಳೆ, ಯಲ್ಲಪ್ಪ ಸಿಂಗನ್ನವರ, ಶಂಕ್ರಪ್ಪ ಹಡಪದ, ಬಸಮ್ಮ ಸುಳ್ಳಿಕೆರೆ ಸೇರಿದಂತೆ ಅನೇಕರಿದ್ದರು.