ವಿಐಎಸ್‌ಎಲ್‌ ಪುನಾರಂಭ ಕಾಂಗ್ರೆಸ್‌ ಸರ್ಕಾರದ ಆಶಯ: ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್

| Published : Aug 11 2024, 01:32 AM IST

ವಿಐಎಸ್‌ಎಲ್‌ ಪುನಾರಂಭ ಕಾಂಗ್ರೆಸ್‌ ಸರ್ಕಾರದ ಆಶಯ: ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಎಂಪಿಎಂ ಕಾರ್ಖಾನೆಯೂ ಆರಂಭವಾದರೆ ರಾಜ್ಯಕ್ಕೆ ಅನುಕೂಲ. ಅದರೆ, ಇಲ್ಲಿ ಎರಡು ಬಗೆಯ ಅಭಿಪ್ರಾಯಗಳಿವೆ. ಕಾರ್ಖಾನೆಯನ್ನು ಸರ್ಕಾರ ನಡೆಸುವುದು ಸದ್ಯದ ಮಟ್ಟಿಗೆ ಆಗುವುದಿಲ್ಲ ಎಂದು ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಪುನಾರಂಭವಾಗಬೇಕು ಎಂಬುದು ಕಾಂಗ್ರೆಸ್‌ ಸರ್ಕಾರದ ಆಶಯ. ರಾಜ್ಯದವರೇ ಆದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಉಕ್ಕು ಸಚಿವರಾಗಿರುವುದು ವಿಐಎಸ್‌ಎಲ್‌ ಕಾರ್ಖಾನೆ ಇದಕ್ಕೆ ಕಾಯಕಲ್ಪ ಸಿಗುವ ನಿರೀಕ್ಷೆ ಇದೆ ಎಂದು ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕುಮಾರಸ್ವಾಮಿಯವರು ಸಚಿವರಾದ ಬಳಿಕ ಕಾರ್ಖಾನೆಗೆ ಭೇಟಿ ನೀಡಿದ್ದಾರೆ. ಇದಕ್ಕೆ ಅಗತ್ಯ ಇರುವ ಅನುದಾನ ಕಚ್ಚಾ ಸಾಮಗ್ರಿ ಮತ್ತು ತಾಂತ್ರಿಕ ನೆರವನ್ನು ನೀಡಿದರೆ ಕಾರ್ಖಾನೆ ಆರಂಭವಾಗಬಹುದು. ರಾಜ್ಯ ಸರ್ಕಾರದಿಂದ ಎಲ್ಲಾ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.ಮುಡಾ ಹಗರಣ ಬಿಜೆಪಿ ಸೃಷ್ಟಿ:

40 ವರ್ಷದ ರಾಜಕಾರಣದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ನಡೆದುಕೊಂಡಿರುವ ಸಿದ್ದರಾಮಯ್ಯ ಮುಂದುವರಿದರೆ ತಮ್ಮ ಬೇಳೆ ಬೇಯಿವುದಿಲ್ಲ ಎಂದು ಬಿಜೆಪಿಯವರು ಮುಡಾ ಹಗರಣ ಸೃಷ್ಟಿಸಿದ್ದಾರೆ ಎಂದು ಮುಡಾ ಹಗರಣ ಕುರಿತು ಪ್ರತಿಕ್ರಿಯಿಸಿದರು.

ಈ ಪ್ರಕರಣದಲ್ಲಿ ಸಿದ್ದರಾಮಯ್ಯರ ಪಾತ್ರ ಏನೂ ಇಲ್ಲ. ಅವರ ಪತ್ನಿಯ ಕುಟುಂಬದ ಆಸ್ತಿಯನ್ನು ಭೂಸ್ವಾಧೀನ ಮಾಡಿಕೊಂಡಿರುವ ಮುಡಾ ಬದಲಿ ನಿವೇಶನ ನೀಡಿದೆ. ಈ ಎಲ್ಲ ಪ್ರಕ್ರಿಯೆಗಳನ್ನೂ ಹಿಂದಿನ ಬಿಜೆಪಿ ಸರಕಾರವೇ ಮಾಡಿದೆ. ಈಗ ಸುಮ್ಮನೇ ವಿವಾದ ಸೃಷ್ಟಿಮಾಡುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ವಿಜಯೇಂದ್ರ ಅವರ ಬಗ್ಗೆ ಅವರದೇ ಪಕ್ಷದ ಯತ್ನಾಳ್ ಮಾಡುತ್ತಿರುವ ಆರೋಪಗಳ ಬಗ್ಗೆ ಮೊದಲು ತನಿಖೆಯಾಗಬೇಕು. ಮಾಜಿ ಸಿಎಂ ಕುಮಾರಸ್ವಾಮಿ ಯವರ ಮೇಲೆ ಪ್ರಾಸಿಕ್ಯೂಷನ್‌ಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಳ್ಳದ ರಾಜ್ಯಪಾಲರು ಗಡಿಬಿಡಿಯಲ್ಲಿ ಸಿದ್ದರಾಮಯ್ಯರಿಗೆ ನೋಟಿಸ್ ನೀಡಿದ್ದಾರೆ.

ನಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮಾಡುತ್ತಿರುವ ಹುನ್ನಾರ ಇದು. ಸಿದ್ದರಾಮಯ್ಯ ಅವರು ದೇವರಾಜು ಅರಸು ನಂತರದ ಮೇಧಾವಿ ರಾಜಕಾರಣಿ ಅವರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ಇದೆ. ಬಿಜೆಪಿಯವರು ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು. ಕಾನೂನು ಹೋರಾಟಕ್ಕೆ ಪಕ್ಷ ಹಾಗೂ ಸರಕಾರ ಸಿದ್ಧವಿದೆ ಎಂದು ಹೇಳಿದರು

ವಿಮಾನ ನಿಲ್ದಾಣ ಕುರಿತು ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ವಾತಾವರಣದ ಕಾರಣ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕಾಫ್ ಸಾಧ್ಯವಾಗುತ್ತಿಲ್ಲ. ಇಲ್ಲಿನ ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ಯತ್ನವನ್ನು ರಾಜ್ಯ ಸರ್ಕಾರ ಮಾಡಲಿದೆ. ಇಲ್ಲಿ ಇದೊಂದೇ ಸಮಸ್ಯೆಯಲ್ಲ. ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗಿಲ್ಲ. ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಬೇಕಿದೆ. ಎಲ್ಲವನ್ನೂ ಹಂತಹಂತವಾಗಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಇಬ್ಬಗೆಯ ನಿಲುವುಗಳಿಂದ ಹಿನ್ನಡೆಎಂಪಿಎಂ ಕಾರ್ಖಾನೆಯೂ ಆರಂಭವಾದರೆ ರಾಜ್ಯಕ್ಕೆ ಅನುಕೂಲ. ಅದರೆ, ಇಲ್ಲಿ ಎರಡು ಬಗೆಯ ಅಭಿಪ್ರಾಯಗಳಿವೆ. ಕಾರ್ಖಾನೆಯನ್ನು ಸರ್ಕಾರ ನಡೆಸುವುದು ಸದ್ಯದ ಮಟ್ಟಿಗೆ ಆಗುವುದಿಲ್ಲ. ಖಾಸಗಿಯವರು ಅದನ್ನು ನಡೆಸಬೇಕು. ಕಾರ್ಖಾನೆಗೆ ಅಗತ್ಯವಿರುವ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಬೆಳೆಯಲು ರಾಜ್ಯ ದಲ್ಲಿ ನಿಷೇಧ ಹೇರಲಾಗಿದೆ. ಈ ಕಚ್ಚಾ ವಸ್ತುಗಳಿಲ್ಲದೆ ಕಾರ್ಖಾನೆ ಆರಂಭವಾಗುವುದಿಲ್ಲ. ಅಕೇಶಿಯಾ ಮತ್ತು ನೀಲಗಿರಿ ಬೆಳೆಯಲು ಅವಕಾಶ ನೀಡಿದರೆ ಅಂತರ್ಜಲ ಕಡಿಮೆಯಾಗುತ್ತದೆ. ಬೆಳೆಯಲು ಅವಕಾಶ ಕೊಡಬಾರದು ಎಂದು ಒಂದು ವರ್ಗ ಹೇಳುತ್ತದೆ. ಮತ್ತೊಂದು ವರ್ಗ ಕಾರ್ಖಾನೆ ಆರಂಭಿಸಿ ಎನ್ನುತ್ತಿದೆ. ಈ ಇಬ್ಬಗೆಯ ನಿಲುವುಗಳಿಂದ ಹಿನ್ನಡೆಯಾಗಿದೆ. 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ಮತ್ತು ಅಕೇಶಿಯಾ ಬೆಳೆಯಲಾಗಿತ್ತು. ಈ ಭೂಮಿಯ ಗುತ್ತಿಗೆ ವಿಸ್ತರಣೆಗೆ ರಾಜ್ಯ ಸರ್ಕಾರ ಕೇಳಿದೆ ಅದಿನ್ನೂ ಅಂತಿಮವಾಗಿಲ್ಲ ಎಂದು ಹೇಳಿದರು.