ಶಿಗ್ಗಾಂವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ವಿಧೇಯಕವು ಲೋಕಸಭೆಯಲ್ಲಿ ಪ್ರತಿಪಕ್ಷಗಳ, ವಿಶೇಷವಾಗಿ ಕಾಂಗ್ರೆಸ್ ವಿರೋಧದಿಂದಾಗಿ ಸೋಲೊಪ್ಪಿರುವುದು ಖಂಡನೀಯ ಎಂದು ಶಿಗ್ಗಾಂವಿ ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಈರಣ್ಣ ಪಂಚಪ್ಪ ನವಲಗುಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಈ ಕುರಿತು ರಾಜ್ಯಪಾಲರಿಗೆ ಉಪತಹಸೀಲ್ದಾರ್‌ ವಿಶ್ವನಾಥ್ ಕಿಟ್ಟಿ ಅವರ ಮುಖಾಂತರ ಮನವಿ ಸಲ್ಲಿಸಿರುವ ಅವರು, ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಪ್ರತಿಪಕ್ಷಗಳ ವಿರೋಧದಿಂದಾಗಿ ಸೋಲಾಯಿತು. ಮಹಿಳೆಯರಿಗೆ ಸಿಗಬೇಕಾದ ಹಕ್ಕನ್ನು ಕಿತ್ತುಕೊಂಡ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಈ ಸೋಲನ್ನು ವಿಜಯೋತ್ಸವದಂತೆ ಆಚರಿಸಿರುವುದು ಅಮಾನವೀಯ ಮತ್ತು ಖಂಡನೀಯ ಎಂದು ಹೇಳಿದರು.

ದೇವೇಗೌಡರ ಕೊಡುಗೆ: ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ. ೩೩ರಷ್ಟು ಮೀಸಲಾತಿ ನೀಡಿದ್ದರು. ಅಷ್ಟೇ ಅಲ್ಲದೆ, ದೇಶದ ಪ್ರಧಾನಿಯಾಗಿದ್ದಾಗ ಪ್ರಥಮ ಬಾರಿಗೆ ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಅಂದು ಬೆಂಬಲದ ಕೊರತೆ ಮತ್ತು ರಾಜಕೀಯ ಪಕ್ಷಗಳ ಒಡಂಬಡಿಕೆ ಇಲ್ಲದೆ ವಿಧೇಯಕ ಅಂಗೀಕಾರವಾಗಿರಲಿಲ್ಲ. ಮಹಿಳಾ ಸಬಲೀಕರಣಕ್ಕೆ ಸದಾ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಧೋರಣೆಯನ್ನು ವಿರೋಧಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಶಿಗ್ಗಾಂವ ತಾಲೂಕು ಜೆಡಿಎಸ್ ಘಟಕದ ಪದಾಧಿಕಾರಿಗಳಾದ ಮಹಮ್ಮದ್ ನೂರುಲ್ ಹಸನಖಾನ್ ಖಾಜೇಖನ್, ಸಂಜೀವ ಇಂದೂರ್, ಬಿ.ಸಿ. ಗುದ್ಲಿಶೆಟ್ಟರ್, ಸಂತೋಷ ದುಂಡಪ್ಪನವರ, ಪ್ರಭು ಸ್ವಾಮಿ ಶಾಡಂಬಿಮಠ, ಸಿದ್ದಪ್ಪ ಚಿಕ್ಕಬೆಂಡಿಗೇರಿ, ಶಾಕುಂತಲಾ ನೀರಲಗಿ, ಶಿವರಂಜಿನಿ ಪಾಟೀಲ, ಗೀತಾ ಪಾಟೀಲ, ಲಕ್ಷ್ಮಿ ಕರ್ಜಗಿ, ಪುಷ್ಪಾ ವಾಲ್ಮೀಕಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.