ಜನಾಭಿಪ್ರಾಯದ ಮೇಲೆ ಕ್ಯಾಂಟೀನ್‌ ನಿರ್ಮಾಣ: ಶಾಸಕ ಅಬ್ಬಯ್ಯ

| Published : Sep 21 2024, 01:53 AM IST

ಜನಾಭಿಪ್ರಾಯದ ಮೇಲೆ ಕ್ಯಾಂಟೀನ್‌ ನಿರ್ಮಾಣ: ಶಾಸಕ ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಅವರು ಕೂಡಾ ನನಗೆ ಅಬ್ದುಲ್ ನೋ? ಅಬ್ಬಯ್ಯ ನೋ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ಮೊದಲು ಅವರು ನನ್ನ ಬಳಿ ಕ್ಷಮೆಯಾಚಿಸಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಹುಬ್ಬಳ್ಳಿ:

ಮಂಟೂರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ಮಾತು ಕೇಳುವ ಅವಶ್ಯಕತೆಯಿಲ್ಲ. ಅಲ್ಲಿನ ಜನರ ಅಭಿಪ್ರಾಯ ಆಧರಿಸಿ ಮುಂದುವರಿಯಲಾಗುವುದು. ಜನರು ಬೇಡ ಎಂದರೆ ಬೇರೆಡೆಗೆ ಸ್ಥಳಾಂತರಿಸುತ್ತೇನೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಅವರು ಕೂಡಾ ನನಗೆ ಅಬ್ದುಲ್ ನೋ? ಅಬ್ಬಯ್ಯ ನೋ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ಮೊದಲು ಅವರು ನನ್ನ ಬಳಿ ಕ್ಷಮೆಯಾಚಿಸಲಿ ಎಂದು ವಾಗ್ದಾಳಿ ನಡೆಸಿದರು.

ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಯಾವ ರೀತಿಯ ಪರಿಹಾರ ಕ್ರಮ ಮಾಡಬೇಕು ಅವೆಲ್ಲವನ್ನೂ ಮಾಡಿದ್ದೇನೆ. ಶ್ರೀರಾಮಸೇನೆಯವರನ್ನು ಕೇಳಿ ನಡೆಯಬೇಕಿಲ್ಲ. ವಿರೋಧಿಗಳು ನನ್ನ ವಿರುದ್ಧ ಬೋಗಸ್ ವಿಚಾರ ಹೇಳಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದ್ಯಾವುದು ನಡೆಯುವುದಿಲ್ಲ ಎಂದು ಶಾಸಕರು ಹರಿಹಾಯ್ದರು.

ಹೆಸರು ಕೆಡಿಸುವ ಕಾರ್ಯ:

ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ವಿನಾಕಾರಣ ಬಿಜೆಪಿಯವರು ಕುಮ್ಮಕ್ಕು ನೀಡಿ, ಹಿಂದೂ-ಮುಸ್ಲಿಂ ವಿಚಾರ ತರುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಕಾರ್ಯ ಬೇಕಾಗಿಲ್ಲ. ಕೆಲಸ ಮಾಡುವ ಸರ್ಕಾರಗಳು ಬೇಕಾಗಿಲ್ಲ. ಏನಾದರೂ ಮಾಡಿ ಸರ್ಕಾರದ ಹೆಸರು ಕೆಡಿಸುವ ಪ್ರಯತ್ನದಲ್ಲಿದ್ದಾರೆ. ರಾಜ್ಯದಲ್ಲಿ ನಡೆಯುವ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಆದರೆ, ಈ ಯಾವುದಕ್ಕೂ ಆಸ್ಪದ ಕೊಡದೇ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಂದರು.

ಮುನಿರತ್ನ ಹೊರಹಾಕಿ:

ಎಚ್‌ಐವಿ ಇಂಜೆಕ್ಷನ್ ಮಾಡಲು ಪ್ರಯತ್ನಿಸಿದ ಆರೋಪದಲ್ಲಿರುವ ಶಾಸಕ ಮುನಿರತ್ನ ಅವರು ಜನಪ್ರತಿನಿಧಿಗಳಾಗಿ ಮುಂದುವರಿಯಲು ಯೋಗ್ಯರಲ್ಲ. ಅವರು ನಾಲಾಯಕ್, ಅಯೋಗ್ಯರು. ಇಂತಹವರಿಂದ ನಾವೆಲ್ಲರೂ ತಲೆತಗ್ಗಿಸುವಂತಾಗಿದೆ. ಪಕ್ಷದವರಿಗೆ ನೈತಿಕತೆ ಇದ್ದರೆ ಅವರನ್ನು ಕೂಡಲೇ ಹೊರಹಾಕಬೇಕು ಎಂದು ಶಾಸಕ ಅಬ್ಬಯ್ಯ ಹರಿಹಾಯ್ದರು.