- 12 ದಿನಗಳ ಪಾದಯಾತ್ರೆ ಮುಗಿಸಿ ಹೊನ್ನಾಳಿ ಪುರಪ್ರವೇಶ । ರಾಯಣ್ಣ ವೃತ್ತ ಬಳಿ ಸ್ವಾಗತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭಕ್ತರು ಮಠ, ಮಠಾಧೀಶರ ಬಗ್ಗೆ ಹೊಂದಿರುವ ಗೌರವಗಳಿಂದ ಗುರುಗಳು ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಸೋಮವಾರ ಶ್ರೀಶೈಲಕ್ಕೆ 12 ದಿನಗಳ ಪಾದಯಾತ್ರೆ ಮುಗಿಸಿ ಸೋಮವಾರ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಮ್ಮನ್ನು ಬರಮಾಡಿಕೊಂಡ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.


ಕಳೆದ ಮಾರ್ಚ್‌ 4ರಂದು ಶ್ರೀಮಠದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಈ ಪಾದಯಾತ್ರೆಯನ್ನು ಸತತ 11 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇನೆ. ಈ ಬಾರಿಯ ಪಾದಯಾತ್ರೆ ಸಂಪನ್ನಗೊಂಡಿದ್ದು, ತಾವು ಶ್ರೀಶೈಲ ಜಗದ್ಗುರು ಆಶೀರ್ವಾದ ಪಡೆದು ಹಿಂದುರಿಗಿದ್ದೇವೆ. ಮಠದ ಜಗದ್ಗುರುಗಳು, ಸ್ವಾಮೀಜಿಗಳು ಹಾಗೂ ಧಾರ್ಮಿಕ ನಾಯಕರು ಏನೇ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದು ಲೋಕಕಲ್ಯಾಣಕ್ಕಾಗಿ. ಆದರೆ ಇದಕ್ಕೆ ಬಹುಮುಖ್ಯವಾಗಿ ಭಕ್ತರ ಭಕ್ತಿ ಹಾಗೂ ಶ್ರದ್ಧೆ ಮುಖ್ಯ ಎಂದರು.

ಲಿಂ. ಶ್ರೀ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಹಾಗೂ ಲಿಂ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಹಿನ್ನೆಲೆ ನಡೆದ ರಾಜ್ಯಮಟ್ಟದ ಕೃಷಿಮೇಳ ಯಶಸ್ವಿಯಾಗಿದೆ. ಇದಕ್ಕೆ ಭಕ್ತರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರ ಸ್ಪಂದನೆ, ಸಹಕಾರಗಳೇ ಕಾರಣ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು. ಬೆಳೆ ಬೆಳೆಯಲಿಕ್ಕೆ ಬೇಕಾದ ಬಿತ್ತನೆ ಬೀಜ, ಸಾವಯವ ಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಿದರೆ ರೈತ ಸಂತುಷ್ಟ ಜೀವನ ನಡೆಸುತ್ತಾನೆ ಎಂದರು.

ಈ ಸಂದರ್ಭ ಕಾಂಗ್ರೆಸ್ ಒಬಿಸಿ ರಾಜ್ಯ ಉಪಾಧ್ಯಕ್ಷ. ಎಚ್.ಎ. ಉಮಾಪತಿ, ಪುರಸಭಾ ಮಾಜಿ ಸದಸ್ಯ ಹೊಸಕೇರಿ ಸುರೇಶ, ಎಂ.ಪಿ. ರಮೇಶ, ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ.ವೀರಣ್ಣ, ಎಂ.ಪಿ. ರಾಜು, ಕತ್ತಿಗೆ ನಾಗರಾಜ, ಕುಮಾರಸ್ವಾಮಿ, ನೆಲಹೊನ್ನೆ ಮಂಜುನಾಥ, ಸದಾಶಿವ, ಸುನಂದಾ, ಸಂತೋಷ, ವಿದ್ಯಾ, ಸುರೇಶ ಇತರರು ಇದ್ದರು.

- - -

-16ಎಚ್.ಎಲ್.ಐ4.:

ಪಾದಯಾತ್ರೆ ಸಂಪನ್ನಗೊಂಡ ನಂತರ ಸೋಮವಾರ ಶ್ರೀಶೈಲದಿಂದ ಹೊನ್ನಾಳಿ ಪುರ ಪ್ರವೇಶ ಮಾಡಿದ ಹಿರೇಕಲ್ಮಠದ ಡಾ,ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳನ್ನು ಭಕ್ತರು ಪುಷ್ಪಾರ್ಚನೆ ಹಾಗೂ ಆರತಿ ಬೆಳಗಿ ಬರಮಾಡಿಕೊಂಡು ಆಶೀರ್ವಾದ ಪಡೆದರು.