ಹನುಮಸಾಗರ: ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಪರಸ್ಪರ ಹೊಂದಾಣಿಕೆ ಹಾಗೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಶಿವಶಂಕರ ಚೆನ್ನಿ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದ ನೌಕರರ ಸಂಘ, ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯಿಂದ ಜಿಲ್ಲಾ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಜು. 5ರಂದು ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಸಣ್ಣಪುಟ್ಟ ತಪ್ಪು ಸಹಜ. ಅವುಗಳನ್ನು ಮರೆತು ಸಮಾಜದ ಪ್ರಗತಿಗೆ ಕೈಜೋಡಿಸಬೇಕು, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸಮಾಜದಿಂದ ವಿವಿಧ ಯೋಜನೆ ರೂಪಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಅಲ್ಪಕಾಣಿಕೆ ನೀಡುವ ಮೂಲಕ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ದೇವಾಂಗ ಸಮುದಾಯವು ಸಂಖ್ಯೆಯಲ್ಲಿ ಸಣ್ಣದಾಗಿದ್ದರೂ ಸಮಾಜದ ಏಳಿಗೆಗಾಗಿ ನಿರಂತರ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ರುದ್ರಮುನಿಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು, ಉಪಾಧ್ಯಕ್ಷ ನಾರಾಯಣಪ್ಪ ಕೊಳ್ಳಿ, ಉಮಾಪತಿ ಮಾಗಿ, ಹನುಮಂತ ಚಳಗೇರಿ, ಶಶಿಧರ ಸಕ್ರಿ, ಪ್ರಹ್ಲಾದಗೌಡ ಮೆದಿಕೇರಿ, ಮಂತ ಬಾದಾ, ಶಂಕರ ಸಕ್ರಿ, ರಾಮನಗೌಡ ಬಿಜ್ಜಲ, ಮಹೇಶ ಕಾಳಗಿ, ಶಿವಾನಂದ ತಿಮ್ಮಾಪುರ, ಸುರೇಶ ಸಿನ್ನೂರ, ಶ್ರೀನಿವಾಸ ಕಂಟ್ಲಿ, ಶಂಕ್ರಪ್ಪ ಸಪ್ಪಂಡಿ, ಮಹೇಶ ಸಿನ್ನೂರ, ಮಂಜುನಾಥ ಸಿನ್ನೂರ, ಶಂಕರ ಹುಲಮನಿ, ವಸಂತ ಸಿನ್ನೂರ, ಏಕನಾಥ ಮೆದಿಕೇರಿ ಇತರರು ಇದ್ದರು.