ಸಾರಾಂಶ
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರೇ ಆರ್ಥಿಕ ನಿರ್ವಹಣೆ ಮಾಡಿದ್ದು, ಜಿಲ್ಲಾಧಿಕಾರಿಗಳ ಕತ್ತಲಲ್ಲಿ ಇಟ್ಟ ಅತಿರೇಕದ ನಡವಳಿಕೆಗಳು ಬುಧವಾರ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಬಹಿರಂಗವಾಯಿತು.
ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ದಿವ್ಯಾಪ್ರಭು ಕಿಡಿಜಿಲ್ಲಾಧಿಕಾರಿ ಕತ್ತಲಲ್ಲಿಟ್ಟು ಅನುದಾನ ನಿರ್ವಹಣೆ । ಲೆಕ್ಕ ಪತ್ರ ಪರಿಶೀಲನೆಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ನೇಮಕ.ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ಕ್ರೀಡಾಂಗಣ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅನುದಾನ ಹಾಗೂ ಸಂಪನ್ಮೂಲ ಬಳಕೆಗೆ ಸಂಬಂಧಿಸಿದಂತೆ ಜಂಟಿ ಖಾತೆ ಮೂಲಕ ಎಲ್ಲವನ್ನು ನಿರ್ವಹಿಸಬೇಕು. ಅಚ್ಚರಿ ಎಂದರೆ ಚಿತ್ರದುರ್ಗದ ಕ್ರೀಡಾ ಮತ್ತು ಸಬಲೀಕರಣ ಇಲಾಖೆ ಇಂತಹದ್ದೊಂದು ಪರಿಪಾಟಲು ಇಟ್ಟು ಕೊಂಡೇ ಇಲ್ಲ. ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರೇ ಆರ್ಥಿಕ ನಿರ್ವಹಣೆ ಮಾಡಿದ್ದು, ಜಿಲ್ಲಾಧಿಕಾರಿಗಳ ಕತ್ತಲಲ್ಲಿ ಇಟ್ಟ ಅತಿರೇಕದ ನಡವಳಿಕೆಗಳು ಬುಧವಾರ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಬಹಿರಂಗವಾಯಿತು.ತಮ್ಮ ಗಮನಕ್ಕೆ ಬಾರದೆ ಆರ್ಥಿಕ ವಹಿವಾಟು ನಡೆಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನಾ ಅವರ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ದಿವ್ಯಾಪ್ರಭು, ಕ್ರಿಮಿನಲ್ ಕೇಸ್ ದಾಖಲು ಮಾಡುವ ಎಚ್ಚರಿಕೆ ನೀಡಿದರು. ನಿಯಮಾವಳಿ ಉಲ್ಲಂಘಿಸಿ ನಡೆಸಿದ ಆರ್ಥಿಕ ಚಟುವಟಿಕೆಗಳ ಪರಿಶೀಲಿಸುವ ತೀರ್ಮಾನ ಕೈಗೊಂಡರು. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳು ಲೆಕ್ಕಪತ್ರಗಳ ಪರಿಶೀಲಿಸಿ ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದರು.ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣ ಅವ್ಯವಸ್ಥೆ ಆಗರವಾಗಿರುವುದರ ಬಗ್ಗೆ ಮಾಧ್ಯಮಗಳು ಡಿಸೆಂಬರ್ 5 ರಂದು ವರದಿ ಮಾಡಿದ್ದವು. ಈ ಬಗ್ಗೆ ವಾಯುವಿಹಾರಿಗಲು ಜಿಲ್ಲಾಧಿಕಾರಿಗಳ ಭೇಟಿಯಾಗಿ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಾಯವಿಹಾರಿಗಳು ಹಾಗೂ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಯಾವುದೇ ಮಾನದಂಡಗಳ ಅನುಸರಿಸದೆ ಅನುದಾನ ಬಳಕೆ ಮಾಡಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಪ್ರತಿ ಹಂತದಲ್ಲಿಯೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಹಾರಿಕೆ ಉತ್ತರ ನೀಡಿದ್ದು ದಿವ್ಯಾಪ್ರಭು ಅವರಿಗೆ ಕೋಪ ತರಿಸಿತು. ನಾನೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲ ಹೆಡ್ ಆಫ್ ಅಕೌಂಟ್ ಗಳು ಗೊತ್ತು. ಮೀಟಿಂಗ್ ಗೆ ಬರುವಾಗ ತಯಾರಾಗಿ ಬರಬೇಕು ಎಂಬ ಪ್ರಜ್ಞೆ ಬೇಡವಾ ಎಂದು ಪ್ರಶ್ನಿಸಿದರು. ಅನುದಾನ ಬಳಕೆ ಮಾಡಿರುವ ಬಗ್ಗೆ ನನಗೆ ಅಕೌಂಟ್ ಡೀಟೈಲ್ಸ್, ಯಾವ ಬ್ಯಾಂಕ್ ನಲ್ಲಿ ಹಣ ಇಡಲಾಗಿದೆ ಎಂಬ ಬಗ್ಗೆ ಪಾಸ್ ಬುಕ್ ಸೇರಿದಂತೆ ಎಲ್ಲ ಮಾಹಿತಿ ಬೇಕು ಎಂದರು.
ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿ ವಾಯು ವಿಹಾರಿಗಳ ಪರವಾಗಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ, ಇಡೀ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ. ಹಾವುಗಳು ಹರಿದಾಡುತ್ತಿವೆ, ಕುಡಿಯಲು ನೀರಿಲ್ಲ, ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರೆ ಅನುದಾನವಿಲ್ಲವೆಂದು ಹೇಳಲಾಗುತ್ತಿದೆ ಎಂದರು.ಇಲಾಖೆಯಲ್ಲಿ ಐವತ್ತು ಲಕ್ಷ ರುಪಾಯಿ ಅನುದಾನವಿದ್ದು ದಸರಾ ಕ್ರೀಡಾಕೂಟ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಕ್ರೀಡೆಗಳಿಗೆ 35 ಲಕ್ಷ ವೆಚ್ಚವಾಗಿದ್ದು 15 ಲಕ್ಷ ಉಳಿದಿದೆ. ಕಳೆದ ವರ್ಷ ಅನುದಾನ ಬಳಕೆ ಮಾಡಿಕೊಳ್ಳದ ಕಾರಣ ಲ್ಯಾಪ್ಸ್ ಆಗಿತ್ತೆಂಬ ಸಂಗತಿಯ ಕ್ರೀಡಾ ಅಧಿಕಾರಿ ಸಭೆ ಗಮನಕ್ಕೆ ತಂದರು.
ಅನುದಾನ ಲ್ಯಾಪ್ಸ್ ಆಗಿರುವ ಸಂಗತಿಯ ತಮ್ಮ ಗಮನಕ್ಕೆ ಏಕೆ ತರಲಿಲ್ಲ, ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ಮಾಡುವಾಗ ನಮಗೊಂದು ಪ್ರತಿ ಹಾಕಬೇಕೆಂಬುದು ನಿಮಗೆ ಗೊತ್ತಿಲ್ಲವೇ, ಪ್ರತಿ ಮೂರು ತಿಂಗಳಿಗೊಮ್ಮೆ ಕ್ರೀಡಾಂಗಣ ಸಮಿತಿ ಸಭೆ ಏಕೆ ಕರೆದಿಲ್ಲವೆಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳ ಯಾವೊಂದೂ ಪ್ರಶ್ನೆಗೆ ಅಧಿಕಾರಿ ಬಳಿ ಸಮಂಜಸ ಉತ್ತರ ಇರಲಿಲ್ಲ. ಸಿಂಥೆಟಿಕ್ ಟ್ರಾಕ್ ನಿರ್ವಹಣೆಗೆ ನೀರು ಇಲ್ಲವೆಂಬ ಸಬೂಬುಗಳ ಜಿಲ್ಲಾಧಿಕಾರಿ ಒಪ್ಪಲಿಲ್ಲ. ಸ್ವಿಮ್ಮಿಂಗ್ ಫೂಲ್ ಗೆ ಇರುತ್ತೆ, ಟ್ರಾಕ್ ಗೆ ಇರಲ್ಲವಾ ಎಂದರು.ಕ್ರೀಡಾಂಗಣ ದುರಸ್ತಿಗೆ ಬೇಕಾದ ಅನುದಾನದ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದರೆ ಸಿಎಸ್ ಆರ್ ಇಲ್ಲವೆ ಡಿಎಂಎಫ್ ಫಂಡ್ ನಲ್ಲಿ ಅವಕಾಶ ಮಾಡಿಕೊಳ್ಳಬಹುದಿತ್ತು. ಇಂತಹ ಯಾವ ಪ್ರಯತ್ನ ಮಾಡಿಯೇ ಇಲ್ಲ. ಈ ಹಿಂದಿನ ಅಧಿಕಾರಿ ಸಸ್ಪೆಂಡ್ ಆಗಿದ್ದರು ಎಂಬುದು ನೆನೆಪಿರಲಿ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಕ್ರೀಡಾಂಗಣ ನಿರ್ವಹಣೆಗೆ ವಾರ್ಷಿಕವಾಗಿ ಎಷ್ಟು ಅನುದಾನ ಬೇಕಾಗುತ್ತದೆ, ಸ್ವಿಮ್ಮಿಂಗ್ ಫೂಲ್, ಸೆಟಲ್ ಕೋರ್ಟ್, ಸೇರಿದಂತೆ ವಿವಿದ ಬಾಬತ್ತುಗಳಿಂದ ಎಷ್ಟು ಹಣ ಸಂಗ್ರಹವಾಗುತ್ತದೆ ಎಂಬಿತ್ಯಾದಿ ಮಾಹಿತಿಗಳೇ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ಅಂತಿಮವಾಗಿ ಲೆಕ್ಕಪತ್ರಗಳ ಪರಿಶೀಲನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗೆ ಜವಾಬ್ದಾರಿ ವಹಿಸಲಾಯಿತು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.