ಕನ್ನಡಪ್ರಭವಾರ್ತೆ ಬೈಂದೂರು

ಬೈಂದೂರು ಕ್ಷೇತ್ರದ ಆಜ್ರಿ ಗ್ರಾಮದ ಎಡ್ನಳಿ, ಹಕ್ಲ್ ಮನೆ ಹಾಗೂ ಮಕ್ಕಿಮನೆ ಭಾಗಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಯಿಂದ ಅಡಿಕೆ, ತೆಂಗು ಹಾಗೂ ಬಾಳೆ ಬೆಳೆಗಳಿಗೆ ಹಾನಿಯಾಗಿದೆ.ಹಾನಿಗೊಳಗಾದ ಪ್ರದೇಶಗಳಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಂತ್ರಸ್ತ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಿದರು.ಈ ವೇಳೆ ಸಂಬಂಧಿತ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹಾಗೂ ಸರ್ಕಾರದ ನಿಯಮಾನುಸಾರ ಅರ್ಹ ರೈತರಿಗೆ ಶೀಘ್ರ ಪರಿಹಾರ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ತೋಟ - ಕೊಟ್ಟಿಗೆಗೆ ಹಾನಿ: ಕುಂದಾಪುರ ತಾಲೂಕಿನ ಅಜ್ರಿ ಗ್ರಾಮದ ರತ್ನಮ್ಮ ಶೆಟ್ಟಿ ಅವರ ತೋಟದಲ್ಲಿ ಅಡಕೆ ಮರಗಳು ಗಾಳಿಮಳೆಗೆ ಉರುಳಿ 30,000 ರು., ಹರ್ಕೂರು ಗ್ರಾಮದ ಕೆ. ಎನ್. ಬಾಲಕೃಷ್ಣ ಶೆಟ್ಟಿ ಅವರಿಗೆ 4,000 ರು., ಉಳ್ಳೂರು ಗ್ರಾಮದ ಶ್ರೀದೇವಿ ಕುಲಾಲ ಅವರಿಗೆ 15,000 ರು., ಯಶೋದಾ ನರಸಿಂಹ ಅವರಿಗೆ 20,000, ರು., ರತ್ನಾಕರ ಕುಲಾಲ ಅವರಿಗೆ 23,000 ರು. ಮತ್ತು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಜಯಂತಿ ಹೆಗಡೆ ಅವರಿಗೆ 20,000 ರು. ನಷ್ಟವಾಗಿದೆ. ಬೈಂದೂರು ತಾಲೂಕಿನ ಹೆರಂಜಾಲು ಗ್ರಾಮದ ಸುಜಾತಾ ಅವರ ಕೊಟ್ಟಿಗೆ ಮತ್ತು ಕೆರ್ಗಾಲು ಗ್ರಾಮದ ಮಹಾದೇವಿ ಅವರ ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ. ಬೈಕ್ ಸವಾರನಿಗೆ ಗಾಯ: ಸೋಮವಾರ ಕುಂದಾಪುರ ತಾಲೂಕಿನ ಕುಳಂಜೆ ಗ್ರಾಮದ ಮುಂಡುಕೋಡು ದುರ್ಗಾಪರಮೇಶ್ವರಿ ದೇವಸ್ಥಾನ ಸಮೀಪ ಸುರೇಂದ್ರ ನಾಯ್ಕ್ ಅವರು ಬೈಕಿನಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಜೋರಾಗಿ ಗಾಳಿ ಬೀಸಿ ಮರದ ಕೊಂಬೆಯೊಂದು ತುಂಡಾಗಿ ಇವರ ಭುಜದ ಮೇಲೆ ಬಿದ್ದು ಬಲೆಗೈಯ ಮೂಳೆ ಮುರಿತವಾಗಿದೆ. ಪ್ರಸ್ತುತ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.