ಕನ್ನಡಪ್ರಭ ವಾರ್ತೆ ಹರಿಹರ

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಅವರ ವರದಿಯಂತೆ ಒಳಮೀಸಲು ಜಾರಿಗೊಳಿಸಿ, ಸರ್ಕಾರಿ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಮಾ.27ರಂದು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನಿರ್ಣಯಿಸಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್‌, ಅಂದು ಬೆಳಿಗ್ಗೆ 10ಕ್ಕೆ ಪಕ್ಕೀರಸ್ವಾಮಿ ಮಠದಿಂದ ರಾಣಿ ಚೆನ್ನಮ್ಮ ವೃತ್ತದ ಮುಖಾಂತರ ತಮಟೆ ಭಾರಿಸುತ್ತಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜವು ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿದೆ. ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣವಾಗಬೇಕಿದೆ.

ಈ ನಿಟ್ಟಿನಲ್ಲಿ ರಚನೆಯಾಗಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು, ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6ರಷ್ಟು, ಒಳಪಂಗಡದ ಇತರೆ ಜಾತಿಗಳಿಗೆ ಶೇ.6ರಷ್ಟು ಹಾಗೂ ಉಳಿದ ಸಮುದಾಯದ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ಹಂಚಿಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.


ಆದರೆ, ಸರ್ಕಾರವು ಆಯೋಗದ ವರದಿಯಂತೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳದೆ, ಫೆ.26 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳೆ ಮೀಸಲಾತಿ ಪ್ರಕಾರವೇ 56,432 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹೊರಟಿರುವುದು ಅತ್ಯಂತ ಖಂಡನೀಯ. ಇದು ರಾಜ್ಯದ ಬಹುಸಂಖ್ಯಾತ ಮಾದಿಗ ಸಮಾಜಕ್ಕೆ ಸರ್ಕಾರವು ಬಗೆದ ಮಹಾ ದ್ರೋಹವಾಗಿದೆ ಎಂದರು.

ಆದ್ದರಿಂದ ತಕ್ಷಣವೇ ಈ ನೇಮಕಾತಿ ಆದೇಶವನ್ನು ರದ್ದುಪಡಿಸಿ, ಒಳಮೀಸಲಾತಿ ಸಂಪೂರ್ಣವಾಗಿ ಜಾರಿ ಮಾಡಿದ ನಂತರವೇ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಚೌಡಪ್ಪ ಭಾನುವಳ್ಳಿ, ಕಡ್ಲೆಗೊಂದಿ ತಿಮ್ಮಣ್ಣ, ರಾಜಪ್ಪ, ಸುರೇಶ್‌ ಡಿ.ಕೆಂಚನಹಳ್ಳಿ, ಸಂಜೀವಪ್ಪ, ಮಂಜಪ್ಪ ಗುಡ್ಡದಹಳ್ಳಿ, ಹನುಮಂತ, ವಾಸನದ ಗದಿಗೆಪ್ಪ ಬಿ., ಹನುಮಂತಪ್ಪ ಬಿ., ರಾಮಪ್ಪ ಹಿಂಡಸಘಟ್ಟ, ಕೆಂಚಪ್ಪ, ನಿಂಗಪ್ಪ ಕೆಂಚನಹಳ್ಳಿ ಇತರರು ಭಾಗವಹಿಸಿದ್ದರು.