ಕನ್ನಡ ಪ್ರಭ ವಾರ್ತೆ ಮದ್ದೂರು
ಕೇಂದ್ರ ಸರ್ಕಾರ ಪಿಂಚಣಿದಾರರನ್ನು ವರ್ಗಿಕರಿಸಲು ಪಿಂಚಣಿದಾರರ ನಡುವಿನ ವ್ಯತ್ಯಾಸ ಕಾಯ್ದುಕೊಳ್ಳುವ ಅಧಿಕಾರ, ಮಾನ್ಯ ಮಾಡುವ ಕಾಯ್ದೆ ಜಾರಿ ವಿರೋಧಿಸಿ ರಾಜ್ಯ ನಿವೃತ್ತ ನೌಕರರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ತಾಲೂಕಿನ ನಿವೃತ್ತ ನೌಕರರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಸಂಘದ ಕಚೇರಿ ಆವರಣದಿಂದ ಮೆರವಣಿಗೆ ನಡೆಸಿದ ನಿವೃತ್ತ ನೌಕರರು ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿ ಕೇಂದ್ರ ಸರ್ಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ವಿರುದ್ಧ ಘೋಷಣೆ ಕೂಗಿದರು. ನಿವೃತ್ತ ನೌಕರರ ಹಿತಕ್ಕೆ ಮಾರಕವಾಗಿರುವ ಈ ಕಾಯ್ದೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಪಡಿಸಿದರು.
ಈ ವೇಳೆ ಮಾತನಾಡಿದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಎಂ.ಮಲ್ಲಯ್ಯ, ಯಾವುದೇ ಪೂರ್ವ ಸೂಚನೆ ನೀಡದೆ ಹಣಕಾಸು ಮಸೂದೆ ಭಾಗವಾಗಿ 2025ರ ಮಾರ್ಚ್ 25ರಂದು ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಕಿಡಿಕಾರಿದರು.ಕೇಂದ್ರ ಜಾರಿ ಮಾಡಿರುವ ಕಾಯ್ದೆ ಎಲ್ಲಾ ನಾಗರಿಕರ ನ್ಯಾಯ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಶ್ರಮಿಸುತ್ತಿದೆ. ಸರ್ಕಾರ ಘೋಷಿತ ಉದ್ದೇಶ ಮತ್ತು ಸುಪ್ರೀಂ ಕೋರ್ಟ್ ಘೋಷಣೆಗೆ ವಿರುದ್ಧವಾಗಿದೆ. ಈ ಕಾಯ್ದೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಚಿಕ್ಕ ಪುಟ್ಟಯ್ಯ, ಖಜಾಂಚಿ ಗೋಪಾಲಕೃಷ್ಣ, ಪದಾಧಿಕಾರಿಗಳಾದ ಸಿದ್ದೇಗೌಡ, ಮಲ್ಲೇಶಪ್ಪ, ಎಚ್.ಟಿ.ಪುಟ್ಟಸ್ವಾಮಿ, ವೈರಮುಡಿ, ಗಣೇಶ್, ಅಂಕಪ್ಪ, ದಾಸೇಗೌಡ, ಚೆನ್ನಗಿರಿಗೌಡ, ಪುಟ್ಟೇಗೌಡ, ಗಿರಿಜಮ್ಮ, ಪದ್ಮಾವತಿ, ಮರಿ ದೇವೇಗೌಡ, ಪುಟ್ಟಸ್ವಾಮಿ ಮತ್ತಿತರರು ಭಾಗವಹಿಸಿದ್ದರು.