ಕೊಡಗಿನಲ್ಲಿ ಎರಡು ‘ಪಾನಮುಕ್ತ’ ಗ್ರಾಮಗಳ ಘೋಷಣೆ: ಪಾಯಸ್‌

| Published : May 31 2024, 02:17 AM IST

ಸಾರಾಂಶ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಈ ವರ್ಷದ ಅಂತ್ಯದೊಳಗೆ ಎರಡು ಗ್ರಾಮಗಳನ್ನು ಪಾನಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಈ ವರ್ಷದ ಅಂತ್ಯದೊಳಗೆ ಎರಡು ಗ್ರಾಮಗಳನ್ನು ಪಾನಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ವೇದಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಮದ್ಯ ಮತ್ತಿತರ ಚಟಗಳ ಬಗ್ಗೆ ವ್ಯಕ್ತಿಗಳ ಮನಃಪರಿವರ್ತನೆ ಮಾಡುವಲ್ಲಿ ವೇದಿಕೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಇದೀಗ ಗ್ರಾಮಗಳನ್ನು ಪರಿವರ್ತನೆ ಮಾಡುವ ಮೂಲಕ ಪಾನಮುಕ್ತ ಗ್ರಾಮ ನಿರ್ಮಾಣ ಮಾಡುವುದು ವೇದಿಕೆಯ ಚಿಂತನೆಯಾಗಿದೆ ಎಂದರು.

ಕ್ರಮಕ್ಕೆ ಆಗ್ರಹ:

ಸರ್ಕಾರ ನೂತನ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಬಾರದು, ಮನೆ ಮನೆಯಲ್ಲಿ ಮಾರಾಟ ಮಾಡುವ ಪ್ರಕರಣಗಳ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ವೇದಿಕೆ ಜಿಲ್ಲಾಧಿಕಾರಿಗಳು, ಅಬಕಾರಿ ಇಲಾಖೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಕ್ಕೊತ್ತಾಯ ಮಂಡನೆ ಮಾಡಲಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಕೊಡುತ್ತಿಲ್ಲ. ಬ್ಯಾಂಕ್ ಮೂಲಕ ಸಾಲ ನೀಡುತ್ತಿದೆ. ಸಂಘ ಕೇವಲ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತದೆ. ಸದಸ್ಯರಿಗೆ ಪ್ರಗತಿ ನಿಧಿ ನೀಡುತ್ತದೆ. ಪ್ರಗತಿ ಆಧಾರದ ಮೇಲೆ ನಿಧಿ ನೀಡುವ ಕಾರ್ಯ ನಡೆಯುತ್ತಿದೆ. ಸಂಘದ ಹೆಸರಿನಲ್ಲಿ ಬಡ್ಡಿ ತೆಗೆದುಕೊಳ್ಳುವ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ. ಯೋಜನೆ ಸೇವಾ ಶುಲ್ಕ ಮಾತ್ರ ಪಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಕೆಗಳು ಮತ್ತು ಕೈಗೊಂಡ ನಿರ್ಣಯಗಳ ಅನುಷ್ಠಾನದ ಕುರಿತು ಚರ್ಚಿಸಲಾಯಿತು.

ವೇದಿಕೆ ಮೂಲಕ ಈ ಸಾಲಿನಲ್ಲಿ ನಡೆಯಬೇಕಾದ ಜಾಗೃತಿ ಕಾರ್ಯಕ್ರಮಗಳು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳು, ಮಧ್ಯವರ್ಜನ ಶಿಬಿರ, ನವಜೀವನ ಸಮಿತಿಯ ಕಾರ್ಯಕ್ರಮಗಳು ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

2023-24ನೇ ಸಾಲಿನ ವಾರ್ಷಿಕ ಸಾಧನೆಯ ಕುರಿತು ಯೋಜನಾಧಿಕಾರಿಗಳಿಂದ ವರದಿ ಮಂಡಿಸಲಾಯಿತು. 2024 25 ನೇ ಸಾಲಿನ ಕ್ರಿಯಾ ಯೋಜನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ವೇದಿಕೆಯ ಸದಸ್ಯರಿಗೆ ಆರೋಗ್ಯ ವಿಮೆ ಪತ್ರ ವಿತರಿಸಲಾಯಿತು.

ವೇದಿಕೆಯ ಉಪಾಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಬಾನಂಗಡ, ವೇದಿಕೆ ಜಿಲ್ಲಾ ಕಾರ್ಯದರ್ಶಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ನಿರ್ದೇಶಕಿ ಲೀಲಾವತಿ, ಪ್ರಾದೇಶಿಕ ಅಧಿಕಾರಿ ಗಣೇಶ್ ಆಚಾರ್ಯ ವಿಪತ್ತು ನಿರ್ವಹಣಾ ತಂಡದ ಪ್ರಮುಖರು, ವೇದಿಕೆ ಸದಸ್ಯರು, ಸೋಮವಾರಪೇಟೆ ಮಡಿಕೇರಿ ವಿರಾಜಪೇಟೆ, ಪಿರಿಯಾಪಟ್ಟಣ, ಬೆಟ್ಟದಪುರ, ಅರಕಲಗೂಡು ತಾಲೂಕುಗಳ ಯೋಜನಾಧಿಕಾರಿಗಳು ಪಾಲ್ಗೊಂಡಿದ್ದರು.