ಸಾರಾಂಶ
ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿ ನೀತಿಯನ್ನು ಕೈ ಬಿಡಬೇಕೆಂದು ತಾಲೂಕು ಆಶಾ ಕಾರ್ಯಕರ್ತರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿ ಆಗ್ರಹಿಸಿದರು.
ನರಗುಂದ: ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿ ನೀತಿಯನ್ನು ಕೈ ಬಿಡಬೇಕೆಂದು ತಾಲೂಕು ಆಶಾ ಕಾರ್ಯಕರ್ತರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿ ಆಗ್ರಹಿಸಿದರು.
ಅವರು ಬುಧವಾರ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಹಸೀಲ್ದಾರ್ಗೆ ಮನವಿ ನೀಡಿ ಆನಂತರ ಮಾತನಾಡಿ, ಕೇಂದ್ರ ಸರ್ಕಾರವು ದೇಶದ ಕಾರ್ಮಿಕ ವರ್ಗದ ಹಲವಾರು ಪ್ರಮುಖ ಬೇಡಿಕೆಗಳನ್ನು ಮನ್ನಿಸಿ ಅವುಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ಈ ಹಿಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಿಗೆ ಇನ್ನಷ್ಟು ಜನವಿರೋಧಿ ನೀತಿಗಳನ್ನು ಸೇರಿಸಿ, ಅತೀ ವೇಗವಾಗಿ ಜಾರಿಗೊಳಿಸುತ್ತಿರುವುದನ್ನು ಖಂಡಿಸಿ ನಾವು ಪ್ರತಿಭಟಿಸಿದ್ದರೂ ಕೂಡ ಸರ್ಕಾರ ಈ ನೀತಿ ಕೈಬಿಡಲಾರದ್ದು ವಿಷಾದನೀಯ ಎಂದರು.ರಾಷ್ಟ್ರದ ತಳಮಟ್ಟದಲ್ಲಿ ಸದಾ ಸೇವೆಗೆ ಸಿದ್ಧರಿರುವ ಆಶಾ, ಅಂಗನವಾಡಿ, ಬಿಸಿಯೂಟದ ಮಹಿಳಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಶಾಸನ ಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸಿ ಕಾಯಂ ಮಾಡಬೇಕೆಂದು ಆಗ್ರಹಿಸಿದರು.
ಸರ್ಕಾರ ಈ ಕೂಡಲೇ ರಾಷ್ಟ್ರದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಳದ ಆದೇಶವನ್ನು ಮಾಡಿ ಅಗತ್ಯ ಆರ್ಥಿಕ ಅನುದಾನವನ್ನು ನೀಡಬೇಕು. ಈ ದಿನದಂದು ರಾಜ್ಯದ ಕರ್ನಾಟಕ ರಾಜ್ಯದ ಎಲ್ಲಾ ಅಶಾ ಕಾರ್ಯಕರ್ತೆಯರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೆಗೂ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಆಗ್ರಹಿಸಿದರು. ಎಐಯುಟಿಯುಸಿ ಸೇರಿದಂತೆ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಈ ಹಿಂದೆಯೇ ಕೇಂದ್ರ ಸರ್ಕಾರದ ಮುಂದೆ ಇಟ್ಟಿರುವ ಎಲ್ಲಾ ಹಕ್ಕೊತ್ತಾಯಗಳನ್ನು ಪರಿಗಣಿಸಿ ಸೂಕ್ತ ರೀತಿಯಲ್ಲಿ ಪರಿಹರಿಸಬೇಕೆಂದು ಕೇಂದ್ರ ಸರ್ಕಾರ ವನ್ನು ಒತ್ತಾಯಿಸಿದರು.ಗ್ರೇಡ್-2 ತಹಸೀಲ್ದಾರ್ ಪರಶುರಾಮ ಕಲಾಲವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳಾದ ಶೋಭಾ ಮಲ್ಲನಗೌಡ್ರ, ಸುಮಿತ್ರಿ ಮರಯಣ್ಣವರ, ಜಯಶ್ರೀ, ಗೀತಾ ಹರನಾಳ, ಎಂ.ಬಿ. ನಿಂಬಣ್ಣವರ, ಡಿ.ಟಿ. ಹಿರೇಮಠ, ಎಸ್.ಬಿ. ಕುರಿ, ಕೆ.ಎಚ್. ಹುಲಿ, ಎಲ್.ಎಂ. ಹೊನ್ನಾವರ, ಎಸ್.ವೈ. ಪೂಜಾರ, ಶಾಂತಾ ಪಾಟೀಲ, ಕಮಲಾಕ್ಷಿ ಮಾದರ, ಬಿ.ಎಸ್. ಕಮತರ, ಆರ್.ಎಸ್. ಕಡ್ಲಿಕೊಪ್ಪ, ನಾಗರತ್ನ ನಾಯ್ಕರ, ಉಮಾ ಹೂಗಾರ, ಸಾವಿತ್ರಿ ಕೆಂಚನಗೌಡ್ರ, ಜಿ.ಎಸ್.ಹಿರೇಗೌಡ್ರ ಇದ್ದರು.